ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸ್ಕಿಲ್ ಫೊರ್ಜ್ ವಿದ್ಯಾರ್ಥಿ ಬಳಗ, ಐಇಇಇ ವಿದ್ಯಾರ್ಥಿ ವಿಭಾಗ ಮತ್ತು ಗ್ರಾಮ ವಿಕಾಸ ಯೋಜನೆ ವಿಸಿಇಟಿ ಸಂಯುಕ್ತ ಆಶ್ರಯದಲ್ಲಿ ಕುಳ ಗ್ರಾಮದ ಗ್ರಾಮಸ್ಥರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ತಜ್ಞ ವೈದ್ಯರಿಂದ ಮಾಹಿತಿಯನ್ನು ಪಡೆದ ಸುಮಾರು 35 ವಿದ್ಯಾರ್ಥಿಗಳ ತಂಡ ಉಪನ್ಯಾಸಕರು ಹಾಗೂ ಊರವರ ಸಹಕಾರದೊಂದಿಗೆ 170 ಕ್ಕೂ ಹೆಚ್ಚಿನ ಮನೆಗಳಿಗೆ ಭೇಟಿ ನೀಡಿ ಕರಪತ್ರ ಹಂಚಿ, ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದರು.

ಕಾಲೇಜಿನ ಗ್ರಾಮ ವಿಕಾಸ ಯೋಜನೆಯನ್ವಯ ನಡೆದ ಈ ಕಾರ್ಯಕ್ರಮದಲ್ಲಿ ಸ್ಕಿಲ್ ಫೊರ್ಜ್ ವಿದ್ಯಾರ್ಥಿ ಬಳಗದ ಸಂಯೋಜಕ ಡಾ.ಶ್ರೀಶ ಭಟ್, ಐಇಇಇ ವಿದ್ಯಾರ್ಥಿ ವಿಭಾಗದ ಸಲಹೆಗಾರ್ತಿ ಪ್ರೊ.ರಜನಿ ರೈ.ಬಿ ಮತ್ತು ಕಾಲೇಜಿನ ಗ್ರಾಮ ವಿಕಾಸ ಯೋಜನೆಯ ಸಂಯೋಜಕಿ ಡಾ.ಸೌಮ್ಯ.ಎನ್.ಜೆ ಭಾಗವಹಿಸಿದರು.
ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶನದನ್ವಯ ಗ್ರಾಮವಿಕಾಸ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು ಕುಳ ಗ್ರಾಮದಲ್ಲಿ ಆರೋಗ್ಯ ಶಿಬಿರ, ಗಿಡ ನೆಡುವ ಕಾರ್ಯಕ್ರಮ, ಆವಶ್ಯಕತೆ ಉಳ್ಳವರಿಗೆ ಸಹಾಯ ನೀಡುವುದು ಮುಂತಾದ ಹಲವಾರು ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ ತಿಳಿಸಿದ್ದಾರೆ.