ತುಳು ಚಿತ್ರರಂಗಕ್ಕೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ದಂಪತಿ

ಹರಿಕೃಷ್ಣ ಬಂಟ್ವಾಳ್‌ ಪುತ್ರ ನಾಯಕನಾಗಿರುವ ಚಿತ್ರ ಶಿಲ್ಪಾ ಗಣೇಶ್‌ ನಿರ್ಮಾಣ

ಮಂಗಳೂರು: ಮುಂಗಾರು ಮಳೆ ಖ್ಯಾತಿಯ ಗೋಲ್ಡನ್ ಸ್ಟಾರ್ ಗಣೇಶ್ ಈಗ ತುಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಪತ್ನಿ ಶಿಲ್ಪಾ ಗಣೇಶ್ ತುಳು ಚಿತ್ರವೊಂದನ್ನು ನಿರ್ಮಿಸಲಿದ್ದು, ಅದರಲ್ಲಿ ಅತಿಥಿ ನಟನಾಗಿ ಗಣೇಶ್‌ ನಟಿಸಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶಿಲ್ಪಾ ಗಣೇಶ್‌ ಈಗಾಗಲೇ ನಿರ್ಮಾಪಕಿಯಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಮೊದಲ ಬಾರಿಗೆ ತುಳು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಶಿಲ್ಪಾ ಗಣೇಶ್‌ ಕರಾವಳಿ ಮೂಲದವರು.
ಉತ್ತಮ ಬಜೆಟ್​ನಲ್ಲಿ ಗುಣಮಟ್ಟದ ಸಿನಿಮಾ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಾಜೆಕ್ಟ್​ಗೆ ಕೈ ಹಾಕಿದ್ದು, ಸಿನಿಮಾವನ್ನು ಸಂದೀಪ್ ಬೆದ್ರ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಕತೆ ಹಾಗೂ ಚಿತ್ರಕತೆಯನ್ನು ಮೋಹನ್ ಭಟ್ಕಳ್ ಬರೆದಿದ್ದಾರೆ. ಜನಪ್ರಿಯ ಕ್ಯಾಮೆರಾಮನ್ ಹಾಗೂ ನಿರ್ದೇಶಕ ಸಂತೋಷ್‌ ರೈ ಪಾತಾಜೆ ಈ ಸಿನಿಮಾಕ್ಕೆ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಉತ್ತಮ ತಂತ್ರಜ್ಞರನ್ನೇ ಶಿಲ್ಪಾ ಗಣೇಶ್ ತಮ್ಮ ಮೊದಲ ತುಳು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಸಿನಿಮಾದ ನಾಯಕನಾಗಿ ಕರಾವಳಿ ಭಾಗದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರ ಪುತ್ರ ನಿತ್ಯಪ್ರಕಾಶ್ ಬಂಟ್ವಾಳ ನಟಿಸಲಿದ್ದಾರೆ. ನಾಯಕಿಯಾಗಿ ಹೊಸ ಮುಖವನ್ನು ಪರಿಚಯ ಮಾಡುವ ಉಮೇದಿನಲ್ಲಿದ್ದಾರೆ ಶಿಲ್ಪಾ ಗಣೇಶ್. ಸಿನಿಮಾದ ಕತೆ, ಚಿತ್ರಕತೆ, ತಂತ್ರಜ್ಞರು ಅಂತಿಮವಾಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿವೆ. ಸಿನಿಮಾದ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭ ಆಗಲಿದೆ.
ಸಿನಿಮಾ ಕೌಟುಂಬಿಕ ಕತೆಯನ್ನು ಒಳಗೊಂಡಿದ್ದು, ಹಾಸ್ಯ ಪ್ರಧಾನ ಆಗಿರಲಿದೆ. ಮಂಗಳೂರು, ಉಡುಪಿ, ಮೂಡುಬಿದಿರೆ, ಬಂಟ್ವಾಳ ಸೇರಿದಂತೆ ಕರಾವಳಿ ಭಾಗದಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಚಿತ್ರದ ಹಾಡುಗಳನ್ನು ಕೆಲವು ಬೇರೆ ಲೊಕೇಶನ್​ಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಇದೆ ಎಂದು ನಿರ್ದೇಶಕ ಸಂದೀಪ್ ಹೇಳಿದ್ದಾರೆ. ಶಿಲ್ಪಾ ಗಣೇಶ್ ಮೂಲತಃ ಕರಾವಳಿಯವರು. ಉಡುಪಿ ಬಳಿಯ ಬಾರ್ಕೂರು ಅವರ ಹುಟ್ಟೂರು. ಹಾಗಾಗಿ ತಮ್ಮ ತವರು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಶಿಲ್ಪಾ ಅವರಿಗೆ ಇತ್ತಂತೆ ಹಾಗಾಗಿ ಈಗ ತುಳು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top