ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ : ಹನಿಟ್ರ್ಯಾಪ್‌ ಮಾಡಿದ ಮಹಿಳೆ ಸಹಿತ 4 ಮಂದಿ ಸೆರೆ

ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ಅವರ ಸಹೋದರ ಉದ್ಯಮಿ ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದ ಮೊದಲ ಆರೋಪಿ ಆಯಿಷಾ ರೆಹಮತ್‌ಳನ್ನು ಕೇರಳದಿಂದ ಬಂಧಿಸಿದ್ದಾರೆ. ಮುಮ್ತಾಜ್‌ ಅಲಿ ನದಿಗೆ ಹಾರಿದ ಸುದ್ದಿ ತಿಳಿದ ಕೂಡಲೇ ಅವಳು ಕೇರಳಕ್ಕೆ ಪರಾರಿಯಾಗಿದ್ದಳು.
ಆಯಿಷಾಳ ಪತಿ ರೆಹಮತ್ ಹಾಗೂ ಪ್ರಕರಣ ಐದನೇ ಆರೋಪಿ ಶೊಹೇಬ್ ಮತ್ತು ಸಿರಾಜ್ ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಕಲ್ಲಡ್ಕ ಬಳಿ ರೆಹಮತ್‌ನನ್ನು ಬಂಧಿಸಲಾಯಿತು. ಪ್ರಕರಣ ಪ್ರಮುಖ ಮಾಸ್ಟರ್‌ಮೈಂಡ್ ಎರಡನೇ ಆರೋಪಿ ಅಬ್ದುಲ್ ಸತ್ತಾರ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮುಮ್ತಾಜ್ ಆಲಿ ಅವರನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದ ಆರೋಪ ಇವರ ಮೇಲಿದೆ. ಘಟನೆಗೆ ಸಂಬಂಧಿಸಿದಂತೆ 6 ಜನರ ಮೇಲೆ ಕಾವೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಆಯಿಷಾ ರೆಹಮತ್‌ ಮೊದಲು ಮುಮ್ತಾಜ್‌ ಅಲಿಯವರ ಸಂಸ್ಥೆಯಲ್ಲೇ ನೌಕರಿ ಮಾಡುತ್ತಿದ್ದಳು. ಅಲಿಯವರ ಪರಿಚಯ ಮಾಡಿಕೊಂಡು ಆತ್ಮೀಯತೆ ಬೆಳೆಸಿದ್ದಳು. ನಂತರ ವೀಡಿಯೊ ಇದೆ ಎಂದು ಹೇಳಿ ಹಣಕ್ಕಾಗಿ ಪೀಡಿಸುತ್ತಿದ್ದಳು. ಸುಮಾರು 50 ಲ.ರೂ.ಯನ್ನು ಮುಮ್ತಾಜ್‌ ಅಲಿ ಅವಳಿಗೆ ಪಾವತಿಸಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಆಕೆ 2 ಕೋ. ರೂ.ಗೆ ಬೇಡಿಕೆ ಇಟ್ಟಿದ್ದಳು. ಈ ನಡುವೆ ಮುಮ್ತಾಜ್‌ ಅಲಿಯವರ ವೀಡಿಯೊ ಹೆಂಡತಿ ಮತ್ತು ಮಗಳಿಗೆ ಸಿಕ್ಕಿತ್ತು. ಈ ವಿಚಾರವಾಗಿ ಶನಿವಾರ ರಾತ್ರಿಯಿಂದ ಮನೆಯಲ್ಲಿ ಗಲಾಟೆ ಶುರುವಾಗಿತ್ತು. ಈ ಎಲ್ಲ ಘಟನೆಗಳಿಂದ ಮುಮ್ತಾಜ್‌ ಅಲಿ ಹತಾಶರಾಗಿ ಭಾನುವಾರ ನಸುಕಿನ ಹೊತ್ತು ಮಂಗಳೂರಿನಿಂದ ಬಿಎಂಡಬ್ಲ್ಯು ಕಾರು ಚಲಾಯಿಸಿಕೊಂಡು ಕೂಳೂರಿಗೆ ಬಂದು ನದಿಗೆ ಹಾರಿದ್ದರು. ಬರುವಾಗ ಅವರ ಕಾರು ಖಾಸಗಿ ಬಸ್ಸಿಗೆ ಡಿಕ್ಕಿಯಾಗಿತ್ತು. ಬೆಳಗ್ಗಿನ ವೇಳೆ ಕಾರು ಸೇತುವೆ ಮೇಲೆ ಕಂಡು ಬಂದಾಗ ಮುಮ್ತಾಜ್‌ ಅಲಿ ನದಿಗೆ ಹಾರಿದ ಶಂಕೆಯುಂಟಾಗಿ ಶೋಧ ನಡೆಸಲಾಗಿತ್ತು. ಸೋಮವಾರ ಬೆಳಗ್ಗೆ ಅವರ ಶವ ಸೇತುವೆ ಪಕ್ಕದಲ್ಲೇ ಸಿಕ್ಕಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top