ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಬೈಂದೂರು ಸೇನೇಶ್ವರ ದೇವಸ್ಥಾನದ ಹಿಂಬದಿಯ ಕೆರೆಕಟ್ಟೆಯಲ್ಲಿ ಸಂಭವಿಸಿದ ದುರಂತ

ಕುಂದಾಪುರ: ಕೆರೆಯಲ್ಲಿ ಈಜಲು ಹೋದ 9ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಬೈಂದೂರು ಸೇನೇಶ್ವರ ದೇವಸ್ಥಾನದ ಹಿಂಬದಿಯ ಕೆರೆಕಟ್ಟೆ ಎಂಬಲ್ಲಿ ಸಂಭವಿಸಿದೆ.
ಬೈಂದೂರು ತಾಲೂಕು ಯಡ್ತರೆ ಗ್ರಾಮದ ಯೋಜನಾನಗರ ನಿವಾಸಿ ಕೂಲಿ ಕಾರ್ಮಿಕ ಕೃಷ್ಣ ದೇವಾಡಿಗ ಎಂಬವರ ಮಗ ನಾಗೇಂದ್ರ (13) ಹಾಗೂ ಅಲ್ಲೇ ಸಮೀಪದ ನಿವಾಸಿ ಕಟ್ಟಡ ಸಾಮಾಗ್ರಿ ಪೂರೈಕೆ ಕೆಲಸ ಮಾಡಿಕೊಂಡಿರುವ ಬೈಂದೂರು ರೈಲ್ವೆ ನಿಲ್ದಾಣದ ಬಳಿಯ ಜಿ.ಎಂ ಕಂಪೌಂಡ್ ನಿವಾಸಿ ಶಾನು ಶಾಲಿಯಾನ್ ಎಂಬವರ ಮಗ ಶಾನು ಮೊಹಮದ್ ಶಫಾನ್ (13) ಸಾವನ್ನಪ್ಪಿದ ಬಾಲಕರು.
ಇಬ್ಬರೂ ಬೈಂದೂರು ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು. ಶಾಲೆಯಲ್ಲಿ ಈಗ ಪರೀಕ್ಷೆ ನಡೆಯುತ್ತಿದ್ದು ಮಂಗಳವಾರ ಇಂಗ್ಲಿಷ್ ಪರೀಕ್ಷೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿದ ಬಳಿಕ ಸಂಜೆ 4 ಗಂಟೆ ಸುಮಾರಿಗೆ ನಾಗೇಂದ್ರ, ಶಾನು ಮೊಹಮದ್ ಶಫಾನ್‌ನ ಮನೆಗೆ ಬಂದು ಆತನನ್ನು ಕರೆದುಕೊಂಡು ಕೆರೆಯಲ್ಲಿ ಈಜಲು ಹೋಗಿದ್ದರು.
ರಾತ್ರಿಯಾದರೂ ವಿದ್ಯಾರ್ಥಿಗಳು ಮನೆಗೆ ಬಾರದೆ ಇದ್ದಾಗ ಕೆರೆ ಬಳಿ ಹುಡುಕಾಟ ನಡೆಸಿದಾಗ ಕೆರೆಯ ಬಳಿ ಒಂದು ಸೈಕಲ್, ಬಟ್ಟೆ ಹಾಗೂ ಎರಡು ಜೊತೆ ಚಪ್ಪಲಿ ಪತ್ತೆಯಾಗಿದೆ. ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಬುಧವಾರ ನಸುಕಿನ 1.30 ಗಂಟೆಗೆ ಶಾನು ಮೊಹಮದ್ ಶಫಾನ್ ಹಾಗೂ 2.25 ಗಂಟೆಗೆ ನಾಗೇಂದ್ರ ದೇವಾಡಿಗನ ಮೃತದೇಹ ಪತ್ತೆಯಾಗಿದೆ.

ಕೆರೆಕಟ್ಟೆ ಕೆರೆಯು ಮಧ್ಯದಲ್ಲಿ 40 ಅಡಿ ಹಾಗೂ ಸುತ್ತಲೂ 10-20 ಅಡಿ ಆಳವಿದೆ. ಈ ಕೆರೆಯಲ್ಲಿ ಪ್ರತಿ ದಿನ ಊರಿನವರು ಈಜಲು ಬರುತ್ತಿರುತ್ತಾರೆ. ಮಂಗಳವಾರ ದಿನ ಮಳೆ ಇದ್ದುದರಿಂದ ಯಾರೂ ಈಜಲು ಬಂದಿರಲಿಲ್ಲ ಎನ್ನಲಾಗಿದೆ. ಸರಿಯಾಗಿ ಈಜಲು ಬಾರದ ಬಾಲಕರು ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಡಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top