ಬಿ.ಸಿ.ರೋಡ್‌ನಲ್ಲಿ ಪರಿಸ್ಥಿತಿ ನಿಯಂತ್ರಣ: ಸಾಂಗವಾಗಿ ನಡೆದ ಮೆರವಣಿಗೆ

ಪೊಲೀಸರ ಸರ್ಪಗಾವಲು; ಹೆಚ್ಚುವರಿ ಭದ್ರತೆ ನಿಯೋಜನೆ

ಮಂಗಳೂರು: ಮುಸ್ಲಿಂ ಮತ್ತು ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದ ಬೆಳಗ್ಗೆ ತುಸು ಉದ್ವಿಗ್ನಗೊಂಡಿದ್ದ ಬಿ.ಸಿ.ರೋಡ್‌ನಲ್ಲಿ ಪರಿಸ್ಥಿಯನ್ನು ತಕ್ಷಣವೇ ನಿಯಂತ್ರಣಕ್ಕೆ ತರಾಲಾಗಿದ್ದು, ಈಗ ಪರಿಸ್ಥಿತಿ ಪೂರ್ಣವಾಗಿ ಶಾಂತವಾಗಿದೆ ಎಂದು ದಕ್ಷಿಣ ಕನ್ನಡ ಎಸ್​​ಪಿ ಎನ್​.ಯತೀಶ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ತಕ್ಷಣ ಕಾರ್ಐಪ್ರವೃತ್ತರಾದ ಪರೊಣಾಮ ಪರಿಸ್ಥಿತಿ ಉಲ್ಬಣಿಸಲು ನಾವು ಅವಕಾಶ ಕೊಟ್ಟಿಲ್ಲ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿದ ಮುಸ್ಲಿಂ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್​ವೆಲ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಹಬ್ಬ ಆಚರಣೆಗೆ ಯಾವುದೇ ತೊಡಕು ಎದುರಾಗಿಲ್ಲ. ಬಿ.ಸಿ ರೋಡ್​ನಲ್ಲಿ ಇಂದು ಬೆಳಗ್ಗೆ ಈದ್​ ಮಿಲಾದ್ ಮೆರವಣಿಗೆ ನಡೆದಿದೆ.
ಭಾನುವಾರ ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಸಹೋದರ ಹಸೈನಾರ್ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಡಿಯೊ ಒಂದನ್ನು ಹರಿಯ ಬಿಡಲಾಗಿತ್ತು. “ತಾಕತ್ತಿದ್ದರೆ ಈದ್ ಮಿಲಾದ್ ಮೆರವಣಿಗೆ ತಡೆಯಿರಿ. ಶರಣ್ ಪಂಪ್​ವೆಲ್ ಸೋಮವಾರ ಬಿ.ಸಿ ರೋಡ್​ನಿಂದ ಕೈಕಂಬದ ಮಸೀದಿವರೆಗೆ ಈದ್ ಮಿಲಾದ್ ಮೆರವಣಿಗೆ ಮಾಡುತ್ತೇವೆ ನೀನಾಗಲಿ ನಿನ್ನ ಚೇಲಾಗಳಾಗಲಿ ಯಾರು ಬಿ.ಸಿ.ರೋಡಿನಲ್ಲಿದ್ದಾರೆ, ನಿಮಗೆ ತಾಕತ್ತು ದಮ್ಮು ಇದ್ದರೆ ನಮ್ಮ ಮೆರವಣಿಗೆ ಹೋಗುವಾಗ ಬಂದು ನಿಲ್ಲಬೇಕು. ದಾಳಿ ಮಾಡುವ ವಿಷಯ ಬಿಡು, ಅದು ನಿನ್ನಿಂದ (ಶರಣ್ ಪಂಪ್​ವೆಲ್) ಆಗದ ವಿಷಯ. ನೀನು ಕೇವಲ ಮಾಧ್ಯಮದ ಎದುರು ಮಾತ್ರ ಬಾಯಿಗೆ ಬಂದ ಹಾಗೆ ಬೊಗಳಿ ಹೋಗುತ್ತೀಯಾ” ಎಂದು ಈ ಆಡಿಯೋದಲ್ಲಿ ಹೇಳಲಾಗಿತ್ತು.
ಇದರಿಂದ ಆಕ್ರೋಶಗೊಂಡ ಬಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಫೇಸ್​ಬುಕ್​ ಮುಖಾಂತರ ಬಿ.ಸಿ.ರೋಡ್ ಚಲೋಗೆ ಕರೆ ನೀಡಿದ್ದರು. “ಜಿಹಾದಿಗಳೇ ನಿಮ್ಮ ಸವಾಲನ್ನು ಸ್ವೀಕರಿಸಿದ್ದೇವೆ, ನಾವು ಬರುತ್ತಿದ್ದೇವೆ. ನಿಮಗೆ ತಾಕತ್ತು ಇದ್ದರೆ ತಡೆಯಿರಿ. ನೀನು ಹೇಳಿದ ಜಾಗಕ್ಕೆ ಬರುತ್ತೇವೆ. ಹಿಂದುತ್ವ ಮೇಲಾ ಅಥವಾ ಜಿಹಾದಿಗಳಾದ ನೀವು ಮೇಲಾ ಎಂದು ನೋಡೆ ಬಿಡುವ” ಎಂದು ಪೋಸ್ಟ್​ ಮಾಡಿದ್ದರು.

ಪೊಲೀಸ್​ ಅಲರ್ಟ್​​





























 
 

ಸಾಮಾಜಿಕ ಜಾಲತಾಲಣದಲ್ಲಿ ಹರಿದಾಡಿದ ಪೋಸ್ಟ್​ನಿಂದ ಎಚ್ಚತ್ತ ಪೊಲೀಸರು ಪ್ರಚೋದನಕಾರಿ ಹೇಳಿಕೆ ನೀಡಿದ ಬಜರಂಗದಳ ಮುಖಂಡ ಪುನೀತ್ ಅತ್ತಾವರ ಮತ್ತು ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್​ವೆಲ್​, ವಿರುದ್ಧ ಮಂಗಳೂರಿನ ಸೆನ್​​​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಪ್ರಚೋದನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಹರಿಬಿಟ್ಟಿದ್ದ ಮುಸ್ಲಿಂ ಮುಖಂಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿದ್ದಾರೆ.
ಬೆಳಗ್ಗೆ ಹಿಂದು ಸಂಘಟನೆ ಕಾರ್ಯಕರ್ತರು ಬಿಸಿ ರೋಡ್​ನ ರಕ್ತೇಶ್ವರಿ ದೇವಸ್ಥಾನದ ಬಳಿ ಜಮಾವಣೆಯಾದರು. ಕೆಲ ಹೊತ್ತಿನ ಬಳಿಕ ಶರಣ್ ಪಂಪವೆಲ್, ಪುನೀತ್ ಅತ್ತಾವರ ಕೂಡ ಆಗಮಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶರಣ್​ ಪಂಪ್​ವೆಲ್​, ಕೇವಲ ಶರಣ್​ ಪಂಪ್​​ವೆಲ್​​ಗೆ​ ಸವಾಲು ಹಾಕಿದ್ದಲ್ಲ. ಇಡೀ ಹಿಂದೂ ಸಮಾಜಕ್ಕೆ ಸವಾಲು ಹಾಕಿದ್ದರು. ಹೀಗಾಗಿ ಬಿ.ಸಿ.ರೋಡ್​​ಗೆ ನಾವು ಬಂದಿದ್ದೇವೆ. ನಮ್ಮ ಮೆರವಣಿಗೆಯನ್ನು ಪೊಲೀಸರು ತಡೆದಿದ್ದನ್ನು ಖಂಡಿಸುತ್ತೇನೆ. ನಾನು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ. ನಾಗಮಂಗಲದಲ್ಲಿ ಹಿಂದೂ ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಸವಾಲು ಹಾಕಿದವನಿಗೆ ತಾಕತ್​ ಇದ್ದರೆ ಇಲ್ಲಿಗೆ ಬರಬೇಕಿತ್ತು ಎಂದು ಹೇಳಿದರು.

ಸಕಾಲಿಕ ಕಾರ್ಯಾಚರಣೆ

ಕೈಕಂಬ ಮಸೀದಿಯ ಈದ್​ ಮಿಲಾದ್​ ಮೆರವಣಿಗೆ ಮಾರ್ಗ ಬದಲಿಸಿಲ್ಲ. ಹಿಂದೂ ಸಂಘಟನೆಗಳು ಶಾಂತಿಯುತ ಧರಣಿ ನಡೆಸುತ್ತೇವೆಂದಿದ್ದರು. ಹಾಗಾಗಿ ಬಿ.ಸಿ.ರೋಡ್​​ ಜಂಕ್ಷನ್​ನಲ್ಲಿ ಅವಕಾಶ ನೀಡಿದ್ದೇವೆ. ಏನಾದರೂ ಸಮಸ್ಯೆಯಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದೇವೆ. ಈವರೆಗೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂದೆಯೂ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಬಿ.ಸಿ.ರೋಡ್​​ನಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್‌ ವರಿಷ್ಟಾಧಿಕಾರಿ ಯತೀಶ್‌ ಹೇಳಿದ್ದಾರೆ. ಬಿ.ಸಿ ರೋಡ್​ನಲ್ಲಿ ಕೆ.ಎಸ್.ಆರ್.ಪಿ ತುಕಡಿಗಳು, ಆರ್ಮ್ ರಿಸರ್ವ್ ಫೋರ್ಸ್ ಸೇರಿದಂತೆ ವಿವಿಧ ತುಕಡಿಗಳ ಠಿಕಾಣಿ ಹೂಡಿವೆ. ಪರಸ್ಪರ ಪ್ರಚೋದನಕಾರಿ ಹೇಳಿಕೆಯಿಂದ ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top