ನಾಗಮಂಗಲ ಕೋಮು ಗಲಭೆ ಕಾಂಗ್ರೆಸ್‌ ಪ್ರಾಯೋಜಿತ : ಕುಮಾರಸ್ವಾಮಿ ಆರೋಪ

10 ನಿಮಿಷದಲ್ಲಿ ಕಲ್ಲು, ರಾಡ್‌ಗಳು, ತಲವಾರು, ಪೆಟ್ರೋಲ್ ಬಾಂಬ್‌ ಹೇಗೆ ತಂದರು ಎಂದು ಪ್ರಶ್ನೆ

ಮೈಸೂರು: ನಾಗಮಂಗಲದ ಕೋಮು ಹಿಂಸಾಚಾರದ ಹಿಂದೆ ಆಡಳಿತಾರೂಢ ಕಾಂಗ್ರೆಸ್ ಕೈವಾಡವಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮುಂಬರುವ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್‌ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದೆ. ಪೊಲೀಸ್ ಇಲಾಖೆಯ ವೈಫಲ್ಯದಿಂದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಕೋಮು ಗಲಭೆ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1990ರ ದಶಕದಲ್ಲಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ರಾಜೀನಾಮೆಗೆ ಒತ್ತಾಯಿಸಿ ಮಾಡಿದಂತೆ ಇತ್ತೀಚಿನ ಹಿಂಸಾಚಾರವನ್ನು ಕಾಂಗ್ರೆಸ್ ಪ್ರಾಯೋಜಿಸಿದೆ. ಇದು ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರದಂತೆಯೇ ಇದೆ, ಅಲ್ಲಿ ನಿಮಿಷಗಳಲ್ಲಿ ಭಾರಿ ವಿನಾಶ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದರು.
ಎಫ್‌ಐಆರ್ ಪ್ರತಿಯನ್ನು ಹಿಡಿದುಕೊಂಡ ಬಂದ ಕುಮಾರಸ್ವಾಮಿ, ಪೊಲೀಸ್ ದಾಖಲೆಯಲ್ಲಿ ಹಲವು ನ್ಯೂನ್ಯತೆಗಳಿವೆ. ಇಲ್ಲಿ ಪೊಲೀಸರು ಅಸಮರ್ಥರಾಗಿದ್ದಾರೆ. ಹಿಂಸಾಚಾರ ನಡೆದಾಗ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್‌ಪಿ ಸ್ಥಳದಲ್ಲಿ ಇರಲಿಲ್ಲ. ಅಧಿಕಾರಿಗಳು ಎಲ್ಲಿದ್ದರು? ಮೀಸಲು ಪೊಲೀಸರನ್ನು ಬೇರೆ ಪ್ರದೇಶಕ್ಕೆ ಏಕೆ ಸ್ಥಳಾಂತರಿಸಲಾಯಿತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಹತ್ತು ನಿಮಿಷಗಳಲ್ಲಿ ದುಷ್ಕರ್ಮಿಗಳು ಕಲ್ಲು, ಕಬ್ಬಿಣದ ರಾಡ್‌ಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಹೇಗೆ ತಂದರು. ಘಟನೆಯ ಹಿಂದೆ ದೊಡ್ಡ ಪಿತೂರಿ ಇದೆ. ಇಷ್ಟು ದೊಡ್ಡ ಹಿಂಸಾಚಾರ ನಡೆದಿದ್ದನ್ನು ಗೃಹ ಸಚಿವ ಪರಮೇಶ್ವರ್ ಅವರು ಸಣ್ಣ ಘರ್ಷಣೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ಸಹ ಕುಮಾರಸ್ವಾಮಿ ಹೇಳಿದರು.





























 
 

ಪೊಲೀಸರು ಮೆರವಣಿಗೆಗೆ ಅನುಮತಿ ನೀಡಿದ್ದರೂ, ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ಪಟ್ಟಣದಲ್ಲಿ ಉಭಯ ಧರ್ಮದ ಜನರು ಸೌಹಾರ್ದಯುತವಾಗಿ ಬಾಳುತ್ತಿದ್ದು, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸಿಗರು ವಾತಾವರಣ ಹಾಳು ಮಾಡಬಾರದು. ಪೊಲೀಸರು ಮಾಡಿದ ಲೋಪಗಳನ್ನು ಬಹಿರಂಗಪಡಿಸಲು ಮತ್ತು ಹಿಂಸಾಚಾರದ ಹಿಂದಿನ ಹಿಡನ್ ಅಜೆಂಡಾ ಏನಿದೆ ಎಂದು ತಿಳಿದುಕೊಳ್ಳಲು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇನೆ ಎಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top