ಪೊಲೀಸ್‌ ಠಾಣೆ ಎದುರು ಮಹಿಳೆಯರ ಹೈಡ್ರಾಮ

ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಧರಣಿ ಕುಳಿತು ಆಗ್ರಹ

ಮಂಡ್ಯ: ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ಪಡೆದ ಕೆಲವು ವ್ಯಕ್ತಿಗಳ ಕುಟುಂಬದ ಹೆಂಗಸರು ಇಂದು ಬೆಳಗ್ಗೆ ಪೊಲೀಸ್‌ ಠಾಣೆಯ ಎದುರು ಧರಣಿ ಕುಳಿತು ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಹೈಡ್ರಾಮ ಮಾಡಿದ್ದಾರೆ.

ನಾಗಮಂಗಲ ನಗರ ಪೊಲೀಸ್ ಠಾಣೆ ಎದುರು ನೂರಾರು ಮಂದಿ ಮಹಿಳೆಯರು ನಿಷೇಧಾಜ್ಞೆಯನ್ನು ಲೆಕ್ಕಿಸದೆ ಗುಂಪುಗೂಡಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಮ್ಮ ಮಕ್ಕಳನ್ನು ತೋರಿಸಿ, ಅವರನ್ನು ಬಿಡುಗಡೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಮಹಿಳೆಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಪೊಲೀಸ್ ಠಾಣೆ ಎದುರು ಮಹಿಳೆಯರಿಂದ ದಿಢೀರ್ ಪ್ರತಿಭಟನೆ ನಡೆದಿದ್ದು, ಠಾಣೆಯ ಎದುರಿನ ರಸ್ತೆಯಲ್ಲಿ ಧರಣಿ ಕುಳಿತಿದ್ದಾರೆ. ಬಳಿಕ ಮಹಿಳೆಯರಿಗೆ ಇನ್ಸ್‍ಪೆಕ್ಟರ್ ನಿರಂಜನ್ ಕಾನೂನು ಪಾಠ ಮಾಡಿದ್ದಾರೆ. ವಿಚಾರಣೆ ಮಾಡಲು ಕರೆತಂದಿದ್ದೇವೆ. ತಪ್ಪು ಮಾಡದವರನ್ನು ಬಿಟ್ಟು ಕಳುಹಿಸುತ್ತೇವೆ. 144 ಸೆಕ್ಷನ್ ಜಾರಿಯಾಗಿದ್ದು, ಗುಂಪುಗೂಡದೆ ಮನೆಗೆ ತೆರಳಿ ಎಂದು ಮಹಿಳೆಯರನ್ನು ಚದುರಿಸಿದ್ದಾರೆ.
ಪ್ರಕರಣ ಸಂಬಂಧ 46 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬುಧವಾರ ರಾತ್ರಿಯಿಂದ ಸೆ.14ರ ವರೆಗೆ ನಾಗಮಂಗಲದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇಂದು ಪಟ್ಟಣದ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮುಸ್ಲಿಮ್‌ ಯುವಕರ ಕೃತ್ಯ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಇತರ ಹಿಂದೂಪರ ಸಂಘಟನೆಗಳಿಂದ ಇಂದು ನಾಗಮಂಗಲ ಬಂದ್‍ಗೆ ಕರೆ ನೀಡಲಾಗಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top