ವಾಲ್ಮೀಕಿ ನಿಗಮದ 21 ಕೋ. ರೂ. ಕಾಂಗ್ರೆಸ್‌ ಬೂತ್‌ಗಳಿಗೆ ಹಂಚಿಕೆ : ಚಾರ್ಜ್‌ಶೀಟ್‌ನಲ್ಲಿದೆ ಸ್ಫೋಟಕ ಮಾಹಿತಿ

ಇಡೀ ಹಗರಣದ ಸೂತ್ರಧಾರ ಮಾಜಿ ಸಚಿವ ನಾಗೇಂದ್ರ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 21 ಕೋ.ರೂ.ಯನ್ನು ಮಾಜಿ ಸಚಿವ ನಾಗೇಂದ್ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಬೂತ್‌ಗಳಿಗೆ ಹಂಚಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ರಾಜ್ಯ ಸರಕಾರ ನೇಮಿಸಿದ್ದ ಎಸ್‌ಐಟಿಯಿಂದ ಕ್ಲೀನ್‌ಚಿಟ್‌ ಪಡೆದುಕೊಂಡಿದ್ದ ನಾಗೇಂದ್ರ ವಿರುದ್ಧ ಜಾರಿ ನಿರ್ದೇಶನಾಲಯ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ವಾಲ್ಮೀಕಿ ನಿಗಮದ ಕೋಟ್ಯಂತರ ರೂಪಾಯಿ ಹಣವನ್ನು ಯಾವ ರೀತಿ ವ್ಯವಸ್ಥಿತವಾಗಿ ಲೂಟಿ ಮಾಡಲಾಗಿದೆ ಎಂಬುದರ ಬಗ್ಗೆ ವಿಸ್ತೃತವಾದ ವಿವರವಿದೆ.
ಎಸ್​ಐಟಿ ಚಾರ್ಜ್​ಶೀಟ್​​ನಲ್ಲಿ ನಾಗೇಂದ್ರ ಹೆಸರೇ ಇರಲಿಲ್ಲ. ಮುಖ್ಯಮಂತ್ರಿ ಆದಿಯಾಗಿ ಎಲ್ಲ ಕಾಂಗ್ರೆಸ್ ನಾಯಕರೂ ಹಗರಣದಲ್ಲಿ ನಾಗೇಂದ್ರ ಕೈವಾಡ ಇಲ್ಲ ಎಂದೇ ಹೇಳಿ ಸಮರ್ಥಿಸಿಕೊಂಡಿದ್ದರು. ಆದರೆ ನಾಗೇಂದ್ರರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದೀಗ ಹಗರಣ ಸಂಬಂಧ ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​ಶೀಟ್​​ನಿಂದ ಸ್ಫೋಟಕ ಅಂಶಗಳು ಬಯಲಾಗಿವೆ.
ಇಡೀ ಹಗರಣದ ಸೂತ್ರಧಾರನೇ ನಾಗೇಂದ್ರ ಎಂಬುದನ್ನು ಸಾಕ್ಷಿ ಸಮೇತ ಜನಪ್ರತಿನಿಧಿಗಳ ಕೋರ್ಟ್​​ಗೆ ಸಲ್ಲಿಸಿರುವ ಚಾರ್ಜ್​​​ಶೀಟ್​​ನಲ್ಲಿ ಇಡಿ ತಿಳಿಸಿದೆ. ಆರೋಪಿ ಸತ್ಯನಾರಾಯಣ ವರ್ಮ ಜೊತೆ ನಿಕಟ ಸಂಪರ್ಕ ಹೊಂದಿದ್ದ ಬಗ್ಗೆ ಚಾರ್ಜ್​​​ಶೀಟ್​​ನಲ್ಲಿ ಉಲ್ಲೇಖಿಸಿದ್ದು, ನಾಗೇಂದ್ರ ಅಣತಿಯಂತೆಯೇ ಸಂಪೂರ್ಣ ಹಣದ ವಹಿವಾಟು ನಡೆದಿದೆ ಎಂದು ಉಲ್ಲೇಖಿಸಲಾಗಿದೆ.
ನಿಗಮದ 21 ಕೋಟಿ ರೂಪಾಯಿಯನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಮನಿಟ್ರಯಲ್ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ. ನಾಗೇಂದ್ರ ಸೇರಿ 5 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಹೈಗ್ರೌಂಡ್ಸ್ ಹೋಟೆಲ್​​ನ ಮೀಟಿಂಗ್​ನಿಂದ ನಿಗಮದ‌ ಲೆಕ್ಕಪರಿಶೋಧಕ ಚಂದ್ರಶೇಖರ್ ಆತ್ಮಹತ್ಯೆ ನಡೆದು ವಿಡಿಯೋ ವೈರಲ್ ಆಗುವವರೆಗೆ ಷಡ್ಯಂತ್ರ, ಅಕೌಂಟ್ ಟ್ರಾನ್ಸಾಕ್ಷನ್, ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಅಕೌಂಟ್ ಓಪನ್ ಮಾಡಿದ್ದು, ತೆಲಂಗಾಣದ ಬ್ಯಾಂಕ್‌ಗೆ ಹಣ ವರ್ಗಾವಣೆ, ಆ ಮೂಲಕ ಇತರರಿಗೆ ಹಣ ವರ್ಗಾವಣೆಗಳು ಒಂದಕ್ಕೊಂದು ಇಡೀ ಅವ್ಯವಹಾರದ ಚಿತ್ರಣ ಬಿಚ್ಚಿಟ್ಟಿದ್ದವು. ಇ.ಡಿ. ತನಿಖೆ ವೇಳೆ ಒಂದೊಂದೇ ಅಸಲಿಯತ್ತು ಅನಾವರಣಗೊಂಡಿತ್ತು.
ವಾಲ್ಮೀಕಿ ನಿಗಮಕ್ಕೆ ಪದ್ಮನಾಭರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿ ಹಣ ಲಪಟಾಯಿಸಲು ನಾಗೇಂದ್ರ ಸಂಚು ಹೂಡಿದ್ದರು. ನಾಗೇಂದ್ರ ಆಪ್ತ ಸಹಾಯಕ ವಿಜಯ್ ಕುಮಾರ್ ಮೊಬೈಲ್‌ನಲ್ಲಿ ಹಣದ ಬಂಡಲ್ ಫೋಟೋಗಳ ಜತೆಗೆ ಎಲ್ಲೆಲ್ಲಿಗೆ ನಗದು ಪೂರೈಸಬೇಕೆಂದು ಉಲ್ಲೇಖಿಸಿದ್ದ ಚೀಟಿಯ ಚಿತ್ರಗಳು ಪತ್ತೆಯಾಗಿವೆ ಎಂದು ಇಡಿ ಚಾರ್ಜ್​ಶೀಟ್​ನಲ್ಲಿ ತಿಳಿಸಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ 20.19 ಕೋಟಿ ರೂ. ಬೂತ್‌ಗಳಿಗೆ ಹಂಚಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಅಂದಿನ ಸಚಿವ ಬಿ. ನಾಗೇಂದ್ರ ಖುದ್ದು 5.26 ಕೋಟಿ ರೂ. ಬಳಸಿರುವುದನ್ನು 15 ಸಾಕ್ಷಿಗಳಿಂದ ದೃಢಪಡಿಸಿಕೊಳ್ಳಲಾಗಿದೆ ಎಂದು ಚಾರ್ಜ್​​ಶೀಟ್​​ನಲ್ಲಿ ಇ.ಡಿ ಉಲ್ಲೇಖಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top