ಪುತ್ತೂರು: ಕಡಬ ಸ್ಪಂದನ ಸಹಕಾರ ಸಂಘದ ಪ್ರಥಮ ವಾರ್ಷಿಕ ಸಭೆ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ಪಂದ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ ಮಾತನಾಡಿ, ಸಂಘ ಒಟ್ಟು 11 ನಿರ್ದೇಶಕರನ್ನು ಹೊಂದಿದ್ದು, ಆಡಳಿತ ಮಂಡಳಿ ವರದಿ ವರ್ಷದಲ್ಲಿ ಐದು ಸಭೆಗಳನ್ನು ನಡೆಸಿದೆ. ಸದಸ್ಯರಿಗೆ ಶೀಘ್ರ ಸಾಲ ನೀಡುವ ಉದ್ದೇಶದಿಂದ ತಿಂಗಳಲ್ಲಿ ಎರಡು ಬಾರಿಯಂತೆ ಆಡಳಿತ ಮಂಡಳಿ ಸಭೆ ನಡೆಸಿ ಸಾಲ ವಿತರಣೆಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದ ಅವರು, ಸುಬ್ರಹ್ಮಣ್ಯ ವಲಯದಲ್ಲಿ ಮೊದಲ ಶಾಖೆ ತೆರೆಯುವುದು, ಠೇವಣಿ ಗುರಿ 5 ಕೋಟಿ ಸಾಧಿಸುವುದು, 5.5 ಸಾಲದ ಗುರಿ ಸಾಧಿಸುವುದು, ಮುಂದಿನ ಆರ್ಥಿಕ ವರ್ಷದಲ್ಲಿ ಸಂಘವನ್ನು ಲಾಭದಲ್ಲಿ ಮುನ್ನಡೆಸುವುದು ಎಂದರು.
ಸಂಘದ ವ್ಯವಹಾರದಲ್ಲಿ ಸಂಪೂರ್ಣ ಸಹಕಾರ, ಮಾರ್ಗದರ್ಶನ ನೀಡುತ್ತಿರುವ ಸಂಘದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಉಪಸ್ಥಿತರಿದ್ದು, ಮಾತನಾಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಟಿ., ನಿರ್ದೇಶಕರಾದ ಶೇಖರ ಗೌಡ ಕೆ. ಕುದ್ಮಾರು, ಆಶಾ ತಿಮ್ಮಪ್ಪ ಗೌಡ, ಪಿ.ಕಾಂತಪ್ಪ ಗೌಡ ಪೂವಾಜೆ, ಹಿರಿಯಣ್ಣ ಗೌಡ ಅಮೈ, ದಾಮೋದರ ಗೌಡ ಚೆಕ್ಕಡ್ಕ, ಗೀತಾ ಕುಮಾರಿ ಕೇವಳ, ಚಂದ್ರಶೇಖರ ಸುಣ್ಣಾರ, ಲೋಕೇಶ್ ಬಿ.ಎನ್. ಬಳ್ಳಡ್ಕ, ರೋಹಿತ್ ಎಚ್.ಎಚ್. ಹೊಸೊಳಿಗೆ ಉಪಸ್ಥಿತರಿದ್ದರು.