ಸವಣೂರು: ದೇಶದ ವಿಚಾರ ಬಂದಾಗ ಸ್ವಾರ್ಥವನ್ನು ಮರೆತು ಇಡೀ ಸಮಾಜವನ್ನು ಒಂದಾಗಿ ಕೊಂಡೊಯ್ಯುವ ಮನೋಭಾವ ಸೈನಿಕರದ್ದಾಗಿದೆ. ಒಮ್ಮೆ ಸೈನಿಕನಾದಲ್ಲಿ ಜೀವನಪೂರ್ತಿ ಆತ ಅಂತಹ ಮನೋಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾನೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಾಜ ವಿಫಲವಾಗಿದೆ. ಭಾರತಕ್ಕೆ ಸೈನಿಕನ ಮನಸ್ಥಿತಿಯ ಚಿಂತನೆಯ ಅವಶ್ಯಕತೆಯಿದೆ ಎಂದು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಅವರು ಇಂದು ಸವಣೂರು ವಿದ್ಯಾಗಂಗೋತ್ರಿಯ ವಿದ್ಯಾಚೇತನ ಸಭಾಂಗಣದಲ್ಲಿ ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ಪ್ರವರ್ತಿತ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕ ಶೀಂಟೂರು ನಾರಾಯಣ ರೈಯವರ 13ನೇ ವರ್ಷದ ಸ್ಥಾಪಕರ ದಿನಾಚರಣೆ, ಶೀಂಟೂರು ಸ್ಮೃತಿ, ಶಿಷ್ಯ ವೇತನ ವಿತರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ, ಸನ್ಮಾನ ನೆರವೇರಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಸೈನಿಕನ ಮನೋಸ್ಥಿತಿಯನ್ನು ಬೆಳೆಸಿಕೊಂಡಲ್ಲಿ ಅವರ ಮುಂದಿನ ಭವಿಷ್ಯ ಉತ್ತಮವಾಗಲಿದೆ. ನಮ್ಮ ಸಂಸ್ಕೃತಿಯು ಶ್ರೇಷ್ಠವಾಗಿದೆ. ಅದಕ್ಕಾಗಿ ಭಾರತ ವಿಶ್ವಗುರುವಾಗಿದೆ. ಮುಂದಿನ 25 ವರ್ಷಗಳಲ್ಲಿ ಭವಿಷ್ಯದ ಭಾರತ ಅಮೃತಕಾರಿಯಾಗಲಿದೆ. ಅದನ್ನು ಸಶಕ್ತಗೊಳಿಸುವ ತಾಕತ್ತು ನಮ್ಮಲ್ಲಿರಬೇಕು. ಅಂತಹ ಅವಕಾಶಗಳನ್ನು ವಿದ್ಯಾಥಿ೯ಗಳು ಕಳೆದುಕೊಳ್ಳಬಾರದು ಎಂದರು.
ಶೀಂಟೂರು ಸಂಸ್ಮರಣೆ ಮಾಡಿದ ಕಸಾಪ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಶೀಂಟೂರು ನಾರಾಯಣ ರೈಗಳು ಯೋಧ, ಶಿಕ್ಷಕ, ಸಹಕಾರಿ, ಕೃಷಿಕ ಹೀಗೆ ಓರ್ವನೇ ವ್ಯಕ್ತಿ ಹಲವು ಕ್ಷೇತ್ರಗಳಲ್ಲಿನ ಸಾಧನೆಗಳ ಸಾಧಕರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಸಹಕಾರಿ ಕ್ಷೇತ್ರದ ಬಗ್ಗೆ ಅಲ್ಲಲ್ಲಿ ಭಾಷಣ ಮಾಡುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ನೀಡುತ್ತೇವೆ ಎಂಬ ಬ್ರಿಟೀಷರ ಭರವಸೆಯ ಮೇರೆಗೆ ಸೇನೆಗೆ ಸೇರಿಕೊಂಡಿದ್ದರು. ಇದು ಅವರ ಸ್ವಾತಂತ್ರ್ಯ ಪ್ರೇಮದ ಸಾಕ್ಷಿಯಾಗಿದೆ. ಸ್ವಾತಂತ್ರ್ಯದ ಬಳಿಕ ಗಾಂಧೀಜಿ ಅವರ ಪ್ರೇರಣೆಯಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಕೃಷಿಯಲ್ಲಿಯೂ ತಾಂತ್ರಿಕತೆ ಮತ್ತು ಸಹಕಾರಿ ತತ್ವವನ್ನು ಅಳವಡಿಕೊಂಡಿದ್ದರು. ಪುತ್ತೂರಿನ ಬೋರ್ಡು ಹೈಸ್ಕೂಲ್ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಶಿಕ್ಷಕರ ದತ್ತಿನಿಧಿಯನ್ನು ಆರಂಭಿಸಿದ ಹೆಗ್ಗಳಿಗೆ ಶೀಂಟೂರು ನಾರಾಯಣ ರೈಗಳಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ರೂಪಕಲಾ ಕೆ ಅವರಿಗೆ ‘ಶೀಂಟೂರು ಸನ್ಮಾನ’ ಪ್ರದಾನಿಸಿ ಗೌರವಿಸಲಾಯಿತು. ಸೇನೆಗೆ ನೀಡುವ ಗೌರವಾರ್ಥ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಮಹಮ್ಮದ್ ಝಯಾನ್, ಮನ್ವಿತ್ ಎಚ್ ಆಚಾರ್ಯ, ಕೃಪಾಲಿ ಎಸ್ ಡಿ, ಜಶ್ವಿತ್ ಕೆ, ಆಝ್ಮಿಯತ್ ಸಫಾ, ಕೆ. ಯಶಸ್ವಿ ರೈ, ಯಶ್ವಿನಿ ಪಿ ಆರ್, ಶಿಲ್ಪ ಎನ್ ಮತ್ತು ಶೀಲ ಕೆ ಡಿ ಅವರಿಗೆ ‘ಶೀಂಟೂರು ಶಿಷ್ಯ ವೇತನ’ ನೀಡಿ ಪುರಸ್ಕರಿಸಲಾಯಿತು.
ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಮತ್ತು ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ನಡುಮನೆ, ಬಳ್ಳಾರಿ ಕುಮಾರಸ್ವಾಮಿ ಮಿನರಲ್ ಎಕ್ಸ್ಪೋರ್ಟ್ಸ್ನ ಮಾಲಕ ಮಲಾರ್ಬೀಡು ರವೀಂದ್ರನಾಥ ಆಳ್ವ, ಗುಜರಾತ್ನ ಗ್ರೀನ್ ಹೀರೋ ಆಫ್ ಇಂಡಿಯಾದ ಫಾರೆಸ್ಟ್ ಕ್ರಿಯೇಟರ್ನ ಸಹ ಸ್ಥಾಪಕ ಡಾ. ಆರ್ ಕೆ.ನಾಯರ್ ಮಾತನಾಡಿದರು.
ವೇದಿಕೆಯಲ್ಲಿ ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್ನ ವಿಶ್ವಸ್ಥರಾದ ಎನ್ ಸುಂದರ ರೈ ನಡುಮನೆ, ಎನ್. ಸುಧಾಕರ ರೈ, ರಶ್ಮೀ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ, ವಿದ್ಯಾರಶ್ಮಿ ಸ್ವತಂತ್ರ ಪ.ಪೂ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರಿ ರತ್ನ ಸವಣೂರು ಕೆ.ಸೀತಾರಾಮ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಎನ್.ಜಯಪ್ರಕಾಶ್ ರೈ ವಂದಿಸಿದರು. ಉಪನ್ಯಾಸಕಿ ಪ್ರತಿಭಾ ಎಸ್ ನಿರೂಪಿಸಿದರು.