ಸುಳ್ಯ: ಅರಂತೋಡು ಗ್ರಾಮದ ಬಾಜಿನಡ್ಕದ ವ್ಯಕ್ತಿಯೋರ್ವರು ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಬಾಜಿನಡ್ಕದ ಚನಿಯ(50) ಎಂದು ಗುರುತಿಸಲಾಗಿದೆ. ಚನಿಯ ಅವರು ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆ ಸಮೀಪದ ಹೊಳೆಗೆ ಹೋಗಿದ್ದಾರೆ. ಈ ವೇಳೆ ಹೊಳೆಗೆ ಕಾಲು ಜಾರಿ ಬಿದ್ದಿದ್ದಾರೆ. ಚನಿಯ ಅವರು ಹೊಳೆಗೆ ಬಿದ್ದಿದ್ದನ್ನು ಕಂಡ ಹತ್ತಿರದ ಮನೆಯವರು ಬೊಬ್ಬೆ ಹಾಕಿದಾಗ ಹತ್ತಿರ ಇರುವ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮನ್ಸ ಮುಗೇರರವರು ಓಡಿಬಂದು ನೀರಿಗಿಳಿದು ಚನಿಯರವರನ್ನು ನೀರಿನಿಂದ ಮೇಲೆತ್ತಿದ್ದರಾದರೂ, ಅವರು ಆಗಲೇ ಮೃತಪಟ್ಟಿದ್ದರೆಂದು ತಿಳಿದುಬಂದಿದೆ.
ಬಳಿಕ ಅರಂತೋಡು ಸಹಕಾರಿ ಸಂಘದ ಸಮೃದ್ಧಿ ಮಾರ್ಟ್ ನ ಆಂಬುಲೆನ್ಸ್ ನಲ್ಲಿ ಮೃತದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು ಎಂದು ತಿಳಿದುಬಂದಿದೆ. ಮೃತರು ಪತ್ನಿ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
























