ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯ ಮತ್ತು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು.

ವಿಚಾರ ಸಂಕಿರಣವನ್ನು ದೀಪ ಬೆಳಿಗಿಸಿ ಉದ್ಘಾಟಿಸಿದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಕೆ. ದ್ವಾರಕನಾಥ್ ಬಾಬು ಮಾತನಾಡಿ, ಅಪರಾಧಿಕ ನ್ಯಾಯ ವ್ಯವಸ್ಥೆಯ ಅಪರಾಧಿಕ ವಿಚಾರಣೆಯಲ್ಲಿ ಸಂತ್ರಸ್ತರು ಅಥವಾ ನೊಂದವರು ಪ್ರಧಾನ ಸಾಕ್ಷಿಗಳಾಗಿರುತ್ತಾರೆ. ಯಾವುದೇ ರೀತಿಯ ಪಕ್ಷಪಾತವಿಲ್ಲದೇ ನ್ಯಾಯ ಪ್ರಕ್ರಿಯೆ ನಡೆಸುವಲ್ಲಿ ಈ ಸಾಕ್ಷಿದಾರರ ಸುರಕ್ಷತೆ ಹಾಗೂ ಭದ್ರತೆ ಪ್ರಮುಖವಾಗಿರುತ್ತದೆ. ಆದರೆ ಜಾಗತಿಕವಾಗಿ ಈ ವಿದ್ಯಾಮಾನವನ್ನು ಗಮನಿಸಿದಾಗ ಪ್ರಪಂಚದ ಹಲವಾರು ದೇಶಗಳ ಅಪರಾಧಿಕ ಇತಿಹಾಸದಲ್ಲಿ ಹಲವಾರು ಮಹತ್ವದ ಪ್ರಕರಣಗಳಲ್ಲಿ ಸಾಕ್ಷಿಗಳ ಸಂತ್ರಸ್ಥೆ ಮತ್ತು ಸಾಕ್ಷಿಗಳ ಮೇಲೆ ಹಲ್ಲೆ, ಬೆದರಿಕೆ ಮತ್ತು ಅವರನ್ನು ಕೊಲೆ ಮಾಡಿದ ಹಲವಾರು ನಿದರ್ಶನಗಳನ್ನು ನಾವು ಕಾಣಬಹುದಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ನಮ್ಮ ಕಿಲ್ಪರ್ ಸಂಸ್ಥೆಯು ಸಂತ್ರಸ್ತ ಮತ್ತು ಸಾಕ್ಷಿಗಳ ಕುರಿತಾಗಿ ಜಾಗೃತಿ ಅಭಿಯಾನವನ್ನು ರಾಜ್ಯದಾದ್ಯಂತ ವಿವಿಧ ವಿಚಾರಗೋಷ್ಠಿಗಳನ್ನು ನಡೆಸುವ ಮೂಲಕ ನಡೆಸುತ್ತಿದೆ ಎಂದರು.

ಮಂಗಳೂರಿನ ಹಿರಿಯ ನ್ಯಾಯಾವಾದಿ ಹಾಗೂ ಪುತ್ತೂರಿನ ಪೋಕ್ಸ್ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕರಾಗಿರುವ ಪುಷ್ಪರಾಜ್ ಅಡ್ಯಾಂತಾಯ ದಿಕ್ಸೂಚಿ ಭಾಷಣ ಮಾಡಿ, ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಅಪರಾಧ, ಸಂತ್ರಸ್ತರ ಹಕ್ಕುಗಳು ಹಾಗೂ ಸಾಕ್ಷಿಗಳ ಸಂರಕ್ಷಣೆಯ ಕುರಿತಾದ ಅರಿವು, ಅದಕ್ಕೆ ಪೂರಕವಾದ ಕಾನೂನಿನ ಇತಿಹಾಸ, ಮಹತ್ವದ ತೀರ್ಪುಗಳು ಹಾಗೂ ಇತ್ತೀಚಿನ ಬೆಳವಣಿಗೆಗಳನ್ನು ವಿವರಿಸಿದರು. ಆಧುನಿಕ ಕಾಲಘಟ್ಟದಲ್ಲಿ ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಅಪರಾಧ ಸಂತ್ರಸ್ತರ ಹಕ್ಕುಗಳು ಹಾಗೂ ಸಾಕ್ಷಿಗಳ ಸಂರಕ್ಷಣೆಯ ಪರವಾಗಿ ಕಠಿಣ ಕಾನೂನಿನ ಅಗತ್ಯವಿದೆ ಎಂದರು.





























 
 

’ಲೀಗಮ್ ಸ್ಪೆಕ್ಟ್ರಂ’ ಪುಸ್ತಕರ 5ನೇ ಆವೃತ್ತಿ ಬಿಡುಗಡೆ ಮಾಡಿದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ಡಾ. ಸಿ. ಎಸ್. ಪಾಟೀಲ್ ಮಾತನಾಡಿ, ಶಿಕ್ಷಕ  ಪ್ರತಿ ಹಂತದಲ್ಲಿ ಅಧ್ಯಯನಶೀಲರಾಗಿದ್ದಾಗ ಮಾತ್ರ ’ಲೀಗಮ್ ಸ್ಪೆಕ್ಟ್ರಂ’ ನಂತಹ ವಿದ್ವತ್ಪೂರ್ಣ ಪುಸ್ತಕ ಹೊರ ತರಲು ಸಾಧ್ಯವಾಗುತ್ತಿದೆ. ಕಾನೂನು ಉಪನ್ಯಾಸಕ ಪ್ರತಿದಿನ ಹೊಸ ವಿಚಾರವನ್ನು ತಿಳಿದುಕೊಂಡು, ಅದನ್ನು ಬರವಣಿಗೆಯ ರೂಪದಲ್ಲಿ ಪ್ರಕಟಿಸಿದಾಗ ಭವಿಷ್ಯದಲ್ಲಿ ಬಹಳಷ್ಟು ಕಾನೂನು ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಂದ್ರ ಕಿಣಿ ಮಾತನಾಡಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಪ್ರತಿವರ್ಷ ಪಠ್ಯದ ಜೊತೆಗೆ ಹಲವಾರು ವಿದ್ಯಾರ್ಥಿ ಸ್ನೇಹಿ ಚಟುವಟಿಕೆಗಳನ್ನು ನಡೆಸುತ್ತಿದೆ. ಇಂತಹ ವಿಚಾರ ಸಂಕಿರಣವು ವಿದ್ಯಾರ್ಥಿಗಳಿಗೆ ಬಹಳಷ್ಟು ವಿಚಾರಗಳನ್ನು ಅರ್ಥಪೂರ್ಣವಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದರು.

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಸದೀಯ ಸಂಶೋಧನಾ ಮುಖ್ಯಸ್ಥ ಡಾ. ರೇವಯ್ಯ ಒಡೆಯರ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು.  ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅದ್ಯಯನ ವಿಭಾಗದ ನಿರ್ದೇಶಕ ಡಾ. ಬಿ. ಕೆ. ರವೀಂದ್ರ ಉಪಸ್ಥಿತರಿದ್ದರು.

ಲೀಗಮ್ ಸ್ಪೆಕ್ಟ್ರಂ-೫ ಪುಸ್ತಕ ಬಿಡುಗಡೆ:

ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಪ್ರಕಟಿಸುವ ’ಲೀಗಮ್ ಸ್ಪೆಕ್ಟ್ರಂ’ ಎಂಬ ಪುಸ್ತಕದ ಐದನೇ ಅವೃತಿಯನ್ನು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ಡಾ. ಸಿ. ಎಸ್. ಪಾಟೀಲ್ ಬಿಡುಗಡೆ ಮಾಡಿದರು.

ಕಾಲೇಜಿನ ಪ್ರಾಂಶುಪಾಲೆ ಅಕ್ಷತಾ ಎ. ಪಿ. ಸ್ವಾಗತಿಸಿ, ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ವಿಚಾರ ಸಂಕಿರಣದ ಸಂಯೋಜಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ವಂದಿಸಿದರು. ದ್ವಿತೀಯ ಬಿಎ.ಎಲ್.ಎಲ್.ಬಿ. ವಿದ್ಯಾರ್ಥಿನಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ವಿವಿಧ ವಿಚಾರಗೋಷ್ಠಿಗಳು ನಡೆಯಿತು. ಮಂಗಳೂರಿನ ಹಿರಿಯ ನ್ಯಾಯವಾದಿ ಜಿ. ಕೆ ಪರಮೇಶ್ವರ ಜೋಯಿಸ್, ಪುತ್ತೂರಿನ ಖ್ಯಾತ ವಕೀಲರಾದ ಬಿ. ನರಸಿಂಹ ಪ್ರಸಾದ್, ಮಹೇಶ್ ಕಜೆ, ಮನೋಹರ್ ಎ. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಜೊತೆಗೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳು ವಿಷಯ ಮಂಡನೆ ಮಾಡಿದರು. ಸಂಜೆ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು,  ಮಹಾವಿದ್ಯಾಲಯದ ಶಿಕ್ಷಕ- ರಕ್ಷಕ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top