ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ದುರಂತ ಘಟನೆ ಭಾನುವಾರ ಸಂಜೆ ನಡೆದಿದೆ.
ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಮತ್ತು ಇಲಿಯಾನ್ ಅವರ ಪುತ್ರಿ ಮರಿಯಂ ನಾಶಿಯಾ (14) ಮೃತ ಬಾಲಕಿಯರು.
ಬಂಟ್ವಾಳ ತಾಲೂಕಿನ ನಾವೂರು ಸಮೀಪದ ಮೈಂದಾಳದಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು. ಮನೆಯವರೊಂದಿಗೆ ಸಂಜೆ ಮಕ್ಕಳು ಸ್ಥಳೀಯ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತರಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಮಕ್ಕಳು ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಪೋಷಕರು ಆಸಹಾಯಕರಾಗಿ ರೋದಿಸುತ್ತಾ ನಿಲ್ಲಬೇಕಾದ ಸನ್ನಿವೇಶ ನಡೆದಿತ್ತು ಎನ್ನಲಾಗಿದೆ.
























