ಭವಿಷ್ಯದ ಭಾರತಕ್ಕಾಗಿ ಶಿಕ್ಷಕರ ಸಕ್ರಿಯತೆ – ಸಂವಾದ ಕಾರ್ಯಕ್ರಮ

ಪುತ್ತೂರು: ಶಿಕ್ಷಣವು ಯಶಸ್ವಿ ಸಮಾಜದ ಅಡಿಪಾಯವಾಗಿದೆ. ಸದೃಢ ರಾಷ್ಟ್ರ ನಿರ್ಮಾಣದ ಮೂಲವಾಗಿದೆ. ಆಧುನಿಕ ದಿನಮಾನದಲ್ಲಿ ಇರುವ ನಾವು ಸಮಾಜದಲ್ಲಿ ಸುಸ್ಥಿರ ಬದಲಾವಣೆಯತ್ತ ಗಮನ ಹರಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಾಹಪೂರ ಹೇಳಿದರು.

ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪುತ್ತೂರಿನ ತೆಂಕಿಲದ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಆಯೋಜಿಸಿದ ಭವಿಷ್ಯದ ಭಾರತಕ್ಕಾಗಿ ಶಿಕ್ಷಕರ ಸಕ್ರಿಯತೆ ಎಂಬ ವಿಚಾರವಾಗಿ ಅಧ್ಯಾಪಕರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಶಿಕ್ಷಣ, ನಡವಳಿಕೆ, ವ್ಯಕ್ತಿತ್ವ ಬಹು ಮುಖ್ಯ. ಇವುಗಳನ್ನು ಕೊಡಮಾಡಲ್ಪಡುವ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಜವಾಬ್ದಾರಿ ಬಹು ದೊಡ್ಡದು. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಾಕಾರ ಮೂರ್ತಿಗಳು. ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಶಿಕ್ಷಣ, ಶಿಕ್ಷಕರ ಜವಾಬ್ದಾರಿ ಗಣನೀಯವಾಗಿದೆ ಎಂದು ಹೇಳಿದರು.





























 
 

ಶಿಕ್ಷಣವು ಜನರು ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು, ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಿರುವ ಸಾಧನಗಳನ್ನು ನೀಡುತ್ತದೆ. ಇದು ಪ್ರತಿಯಾಗಿ, ಹೆಚ್ಚು ಪ್ರಬುದ್ಧ ಮತ್ತು ಉತ್ಪಾದಕ ಸಮಾಜವನ್ನು ರಚಿಸಲು ಸಹಾಯ ಮಾಡುತ್ತದೆ. ರಾಷ್ಟ್ರವನ್ನು ನೈಜವಾಗಿ ಬದಲಾಯಿಸುವ ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಯಲು ಅವಕಾಶ ಒದಗಿಸುತ್ತದೆ. ಪರಿಣಾಮಕಾರಿ ಶಿಕ್ಷಣ ಮತ್ತು ಕಲಿಕೆ ವ್ಯವಸ್ಥೆಯನ್ನು ಸ್ಥಾಪಿಸಿದರೆ ಯುವಕರು ತಮ್ಮ ಮತ್ತು ರಾಷ್ಟ್ರದ ಉಜ್ವಲ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ದೇಶದಲ್ಲಿ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು ಶಿಕ್ಷಕರ ಪಾತ್ರ ಅತ್ಯಗತ್ಯ ಎಂದು ಹೇಳಿದರು.

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲಾ ಕಾರ್ಯದರ್ಶಿ ರಮೇಶ ಕೆ. ಮಾತನಾಡಿ, ಆಧುನಿಕ ಸಮಾಜವು ಆಧುನಿಕ ಸಮಸ್ಯೆಗಳನ್ನು ಹೊಂದಿದೆ. ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ, ವಿದ್ಯಾವಂತ ವಲಯವು ಅನೇಕ ಮಾನವ ಸಮಸ್ಯೆಗಳನ್ನು ಪರಿಹರಿಸಬಹುದು. ಶಿಕ್ಷಣವು ಆಧುನಿಕ ಪ್ರಪಂಚದ ಸವಾಲುಗಳು ಮತ್ತು ಅವಕಾಶಗಳಿಗೆ ಜನರನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಆರ್ಥಿಕ ಬೆಳವಣಿಗೆಯನ್ನು ಕಂಡಾಗ ಮಾತ್ರ ಸಮಾಜದಲ್ಲಿ ಶಿಕ್ಷಣದ ಅರ್ಥ ಮತ್ತು ಮಹತ್ವ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಕಾರ್ಯದರ್ಶಿಗಳಾದ ರಮೇಶ ಕೆ., ಕಾರ್ಯಕ್ರಮದ ಸಂಯೋಜಕಿ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹರಿಣಿ ಪುತ್ತೂರಾಯ, ನರೇಂದ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ., ನರೇಂದ್ರ ಪ.ಪೂ. ಕಾಲೇಜಿನ ಸಂಚಾಲಕ ಸಂತೋಷ ಬಿ., ಕಾರ್ಯಕ್ರಮ ಸಂಯೋಜಕ ಗೋವಿಂದರಾಜ ಶರ್ಮ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಗಳ ಮುಖ್ಯ ಶಿಕ್ಷಕರು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಉಪನ್ಯಾಸಕಿ ಮಧುರಾ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ, ಪ್ರಾಧ್ಯಾಪಕಿ ದೀಪಿಕಾ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top