ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜಾತ್ರೋತ್ಸವದ ಅಂಗವಾಗಿ ನೂತನವಾಗಿ ಸಮರ್ಪಣೆಗೊಂಡ ಬ್ರಹ್ಮರಥದ ರಥೋತ್ಸವ ಸಾವಿರಾರು ಭಕ್ತಾದಿಗಳ ಜಯಘೋಷದೊಂದಿಗೆ ಭಾನುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಭಾನುವಾರ ಬೆಳಿಗ್ಗೆ ಜಾತ್ರೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ನವಕ ಕಲಶ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅಪ್ಪಂಗಾಯ, ನವಕ ಕಲಶಾಭಿಷೇಕ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ 7 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆದು ಬಳಿಕ ವೈಭವದ ಬ್ರಹ್ಮರಥೋತ್ಸವ ನಡೆದು ಮಹಾಪೂಜೆ ನಡೆಯಿತು. ಬಳಿಕ ಶ್ರೀ ಭೂತಬಲಿ ಉತ್ಸವ, ಶಯನೋತ್ಸವ, ಕವಾಟಬಂಧನ ನಡೆದು ಅನ್ನಸಂತರ್ಪಣೆ ಜರಗಿತು.
ರಾತ್ರಿ 7 ರಿಂದ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸೌಂದರ್ಯ ಮಂಜಪ್ಪ ಪಿ., ಪವಿತ್ರಪಾಣಿ ಡಾ.ಕೆ.ಹೇಮಂತ ಮೂರ್ತಿ ಎರ್ಕಡಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧೀರಜ್ಗೌಡ ಹಿರ್ಕುಡೇಲು, ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣರಾಜ ಎರ್ಕಡಿತ್ತಾಯ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮ ಜೋಯಿಸ, ಅಭಿವೃದ್ಧಿ ಸಮಿತಿ ಸಂಚಾಲಕ ಮನೋಹರ ನಾಯ್ಕ್, ಕೋಶಾಧಿಕಾರಿ ಕೆ.ಜನಾರ್ದನ ಎರ್ಕಡಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಮಹಾಬಲ ಗೌಡ ಗಡಿಮಾರು, ಉತ್ಸವ ಸಮಿತಿ ಅಧ್ಯಕ್ಷ ಸುಧೀರ್ ಪ್ರಸಾದ್ ಆನಾಜೆ, ಕಾರ್ಯದರ್ಶಿ ಗಿರಿಧರ್ ಜಿ. ಗೋಮುಖ, ವಿವಿಧ ಸಮಿತಿ ಸಂಚಾಲಕರು, ಸರ್ವ ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.
























