ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ರೈತ ಉತ್ಪಾದಕರ‌ ಕಂಪೆನಿಯ‌ ಷೇರು ಮಾರುಕಟ್ಟೆಗೆ ಬಿಡುಗಡೆ

ಮಂಗಳೂರು: ತೆಂಗು ಬೆಳೆಗಾರರೇ ಸ್ಥಾಪಿಸಿ, ಮುನ್ನಡೆಸುತ್ತಿರುವ ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯು ತನ್ನ ಕಾರ್ಯ ವ್ಯಾಪ್ತಿ ಹಾಗೂ ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ಸಾರ್ವಜನಿಕರಿಂದ ಷೇರು ಸಂಗ್ರಹಕ್ಕೆ ಮುಂದಾಗಿದೆ.

15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ತೆಂಗು ಬೆಳೆಗಾರರ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಂಸ್ಥೆ 300 ಕೋಟಿ ರೂ. ಮೌಲ್ಯದ ವಿಸ್ತ್ರತ ಯೋಜನೆ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ 50 ಕೋಟಿ ರೂ. ಮೌಲ್ಯದ ಷೇರು ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಪ್ರತಿ ಷೇರಿನ ಮೌಲ್ಯವು 1000 ರೂ. ಇದ್ದು, ಕನಿಷ್ಠ ಎಂದರೆ ಐದು ಷೇರು ಹಾಗೂ ಗರಿಷ್ಠ ಎಂದರೆ 200 ಷೇರು ಖರೀದಿ ಮಾಡಿ ಹೂಡಿಕೆ ಮಾಡಬಹುದಾಗಿದೆ. ಐದು ಸಾವಿರದಿಂದ ಎರಡು ಲಕ್ಷ ರೂ. ಮೊತ್ತವನ್ನು ಷೇರು ಮೂಲಕ ಹೂಡಿಕೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕುಸುಮಾಧರ ಎಸ್‌.ಕೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಜೂನ್‌ ತಿಂಗಳಲ್ಲಿ ಆರಂಭಿಸಿದ ಕಲ್ಪ ಸಮೃದ್ಧಿ ಯೋಜನೆಯಡಿ ಸಾರ್ವಜನಿಕರಿಂದ ಠೇವಣಿ ಸಂಗ್ರಹ ಯೋಜನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಸಂಗ್ರಹವಾದ ಠೇವಣಿಯ ಮೊತ್ತವನ್ನು ತೆಂಗು ಖರೀದಿ ಮತ್ತು ಕಾರ್ಯವಾಹಿ ಬಂಡವಾಳವಾಗಿ ವಿನಿಯೋಗಿಸಲಾಗಿದೆ. ಈ ಮೂಲಕ ಆರು ತಿಂಗಳಿನಲ್ಲಿ ಸಂಸ್ಥೆಯ ಒಟ್ಟು ವ್ಯವಹಾರವು ಹತ್ತು ಪಟ್ಟು ಹೆಚ್ಚಾಗಿದ್ದು, ಜನರ ವಿಶ್ವಾಸ ಗಳಿಸುತ್ತಿದೆ. ತೆಂಗಿನಕಾಯಿಯಿಂದ ತಯಾರಿಸಿದ ರಸಗೊಬ್ಬರ, ಸಾವಯವ ಗೊಬ್ಬರ ಮತ್ತು ಆಹಾರ ಉತ್ಪನ್ನಗಳ ಅನೇಕ ಪ್ರಯೋಗಗಳು ಮತ್ತು ಮಾರುಕಟ್ಟೆಯ ವಿಮರ್ಶೆಯನ್ನು ಪಡೆದಿದ್ದು ಆಶ್ಚರ್ಯಕರ ಬೇಡಿಕೆಯನ್ನು ಸೃಷ್ಟಿಸಿದೆ. ಈ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಹೆಚ್ಚಿನ ಉತ್ಪನ್ನ ಪೂರೈಕೆಗಾಗಿ ಹೊಸ ವಿಸ್ತ್ರತ ಘಟಕ ಆರಂಭಿಸಲು ಬಂಡವಾಳವಾಗಿ ಷೇರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಪ್ರಥಮ ಹಂತದ ಯೋಜನೆ ಪೂರ್ಣಗೊಂಡ ವೇಳೆ 300 ಮಂದಿಗೆ ನೇರ ಹಾಗೂ 600ಕ್ಕೂ ಅಧಿಕ ಮಂದಿಗೆ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ.





























 
 

ವಿಸ್ತರಣೆಯ ಉದ್ದೇಶ

ಸಂಸ್ಥೆಯ ವಿವಿಧ ತಯಾರಿಕಾ ಘಟಕಗಳು ಜಿಲ್ಲೆಯ ನಾನಾ ಭಾಗದಲ್ಲಿದ್ದು, ಎಲ್ಲ ಘಟಕವನ್ನು ಒಂದೇ ಸೂರಿನಡಿ ತರುವ ಗುರಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ 20 ಎಕರೆ ಭೂಮಿ ಖರೀದಿಸಿ, ಆರಂಭಿಕ ನೆಲೆಯಲ್ಲಿ 50 ಕೋಟಿ ರೂ. ಮೊತ್ತವನ್ನು ಬಂಡವಾಳವಾಗಿ ಹೂಡಲಾಗುವುದು. 20 ಎಕರೆ ಪ್ರದೇಶದಲ್ಲಿ ಆಹಾರ ಉತ್ಪನ್ನ, ರಸಗೊಬ್ಬರ, ಕರಕುಶಲ ಉತ್ಪನ್ನ ಸೇರಿದಂತೆ ತೆಂಗಿನ ಮರದ ಎಲ್ಲ ಭಾಗದಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕಾ ಘಟಕ ಒಂದೇ ಸೂರಿನಡಿ ನಿರ್ಮಾಣವಾಗಲಿದೆ. ಇದರ ಸಂಪೂರ್ಣ ನೀಲನಕ್ಷೆ ತಯಾರಿಸಲಾಗಿದೆ. ಈ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡ ವೇಳೆ ಇದು ದೇಶದ ಮೊದಲ ತೆಂಗು ರೈತರ ಶೂನ್ಯ ತ್ಯಾಜ್ಯ ಘಟಕ ಎಂಬ ಖ್ಯಾತಿಗೆ ಪಾತ್ರವಾಗಲಿದೆ ಎಂದು ವಿವರಿಸಿದರು.

ಹೇಗೆ ಷೇರು ಖರೀದಿ ಮಾಡಬಹುದು?

ಆಸಕ್ತ ಹೂಡಿಕೆದಾರರು ಕರಾವಳಿಯ ನಾನಾ ಭಾಗದಲ್ಲಿರುವ ಶಾಖೆಗೆ ಭೇಟಿ ನೀಡಿ ಖುದ್ದಾಗಿ ಖರೀದಿ ಮಾಡಬಹುದು. ಒಂದು ವೇಳೆ ಶಾಖೆಗೆ ಭೇಟಿ ನೀಡಲು ಸಾಧ್ಯವಿಲ್ಲದ ಗ್ರಾಹಕರು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಖರೀದಿ ಮಾಡಬಹುದಾಗಿದೆ. ಡಿಜಿಟಲ್‌ನಲ್ಲಿ ಖರೀದಿ ಮಾಡಲು ಸಾಧ್ಯವಾಗದ ಗ್ರಾಹಕರು ಸಂಸ್ಥೆಗೆ ದೂರವಾಣಿ ಕರೆ ಮಾಡಿ ನೋಂದಣಿ ಮಾಡಿ ಖರೀದಿ ಮಾಡಬಹುದಾಗಿದೆ. ಮೊದಲ ಹಂತದಲ್ಲಿ ಒಟ್ಟು 50 ಕೋಟಿ ರೂ. ಮೌಲ್ಯದ ಐದು ಲಕ್ಷ ಷೇರುಗಳನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಈ ವರೆಗೆ ರೈತರೇ ಮಾಡಿರುವ ಹೂಡಿಕೆಯಲ್ಲಿ ಸಂಸ್ಥೆಯು ಉತ್ಪಾದಿಸಿರುವ ಆಹಾರ ಹಾಗೂ ಕೃಷಿ ಉತ್ಪನ್ನಗಳನ್ನು ತನ್ನ 11 ಶಾಖೆ ಹಾಗೂ ವಿವಿಧ ಮಳಿಗೆಗಳ ಮೂಲಕ ಗ್ರಾಹಕರಿಗೆ ನೇರವಾಗಿ ತಲುಪಿಸಲಾಗುತ್ತಿದೆ.

ಕಲ್ಪವೃಕ್ಷ ಹಾಗೂ ಕಲ್ಪವಿಕಾಸ ಯೋಜನೆಯಡಿ ಸಂಸ್ಥೆಯ ಉತ್ಪನ್ನಗಳಾದ ಐಸ್‌ಕ್ರೀಂ, ತೆಂಗಿನೆಣ್ಣೆ, ವರ್ಜಿನ್ ತೆಂಗಿನೆಣ್ಣೆ, ಕೋಕೊ ಫೈಬ‌ರ್, ಕೊಬ್ಬರಿ ಚಟ್ಟಿ, ಕೊಬ್ಬರಿ, ಉಪ್ಪಿನಕಾಯಿ, ತೆಂಗಿನ ಮೊಳಕೆ, ತೆಂಗಿನ ನೀರಿನಿಂದ ತಯಾರಿಸುವ ಜೈವಿಕ ರಸಗೊಬ್ಬರ, ಗೆರಟೆಯಿಂದ ಅಲಂಕಾರಿಕ ಹಾಗೂ ಗೃಹ ಬಳಕೆಯ ಉತ್ಪನ್ನ, ಹೈನುಗಾರರಿಗೆ ತೆಂಗಿನ ಹಿಂಡಿ, ತೆಂಗಿನ ಮರದ ಪೀಠೋಪಕರಣ, ಇಪಿಎನ್ (ಬೇರು ಹುಳ ನಿರ್ಮೂಲನ ಜೈವಿಕ ಕೀಟನಾಶಕ), ಎರೆಹುಳ ಗೊಬ್ಬರ, ಇತರೆ ಸಾವಯವ ಗೊಬ್ಬರಗಳು.. ಹೀಗೆ ಹಲವಾರು ದೇಶೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಗ್ರಾಮೀಣ ಭಾಗದ ಮಹಿಳೆಯರ ಸ್ವಾವಲಂಬಿ ಬದುಕಿಗೆ `ಕ್ರಿಯೇಟಿವ್ ಹೌಸ್’ ಮೂಲಕ ತೆಂಗಿನ ಗೆರಟೆಯ ಕಲಾಕೃತಿಗಳ ರಚನೆಗೆ ವಿಶೇಷ ತರಬೇತಿ ನೀಡಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪುಷ್ಟಿ ನೀಡಿದೆ. ಈ ಯೋಜನೆಯಡಿ ತರಬೇತಿ ಪಡೆದ ಮಹಿಳೆಯರಿಗೆ ಸರಕಾರದಿಂದ ಮಹಿಳಾ ಸಬಲೀಕರಣ ಯೋಜನೆಯಡಿ ಯಂತ್ರೋಪಕರಣ ಖರೀದಿಗೆ ವಿಶೇಷ ಸಹಾಯಧನವನ್ನೂ ಸಂಸ್ಥೆಯ ಮೂಲಕ ಒದಗಿಸಲಾಗುತ್ತಿದೆ. ಪ್ರಸ್ತುತ ಕರಾವಳಿಯ 140ಕ್ಕೂ ಅಧಿಕ ಮಹಿಳೆಯರು ತರಬೇತಿ ಪಡೆದು, 12 ರಿಂದ 25 ಸಾವಿರ ರೂ.ವರೆಗೆ ಮಾಸಿಕ ಆದಾಯ ಗಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾನಾ ಭಾಗದ ಒಂದು ಲಕ್ಷ ಮಹಿಳೆಯರಿಗೆ ತರಬೇತಿ ನೀಡಿ ಸ್ವ ಉದ್ಯೋಗ ಕಲ್ಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪೂರೈಸುವ ಉದ್ದೇಶದಿಂದ ಮೊಬೈಲ್ ಅಪ್ಲಿಕೇಷನ್ ಹಾಗೂ ವೆಬ್ ಆಧರಿತ ಇ-ಕಾಮರ್ಸ್ ಪ್ಲಾಟ್‌ಫಾರಂ ಅಭಿವೃದ್ಧಿಪಡಿಸಲಾಗಿದೆ. ಶೀಘ್ರದಲ್ಲೇ ಸಾರ್ವಜನಿಕರ ಪ್ರಯೋಜನಕ್ಕೆ ಸಿಗಲಿದೆ.ಈ ಸಂಸ್ಥೆಯನ್ನು ಕೃಷಿಕರೇ ಸೇರಿ ಆರಂಭಿಸಿದರೂ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಹೆಸರಾಂತ ಆರ್ಥಿಕ ತಜ್ಞರು, ಯಶಸ್ವಿ ಉದ್ಯಮಿಗಳು, ಸಹಕಾರಿ ಧುರೀಣರು, ಅಂತಾರಾಷ್ಟ್ರೀಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನ ಸಾಧಕರನ್ನು ಒಳಗೊಂಡ 16 ಜನರ ಸಮರ್ಥ ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿಯನ್ನು ಸಂಸ್ಥೆಯು ಹೊಂದಿದೆ.

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯು ತೆಂಗು ರೈತರ ಪಾಲಿನ ಆಶಾಕಿರಣ. ಮಾರುಕಟ್ಟೆ ದರಕ್ಕಿಂತ ಉತ್ತಮ ದರದಲ್ಲಿ ತೆಂಗು ಸೇರಿದಂತೆ ಇತರ ತೆಂಗಿನ ಉತ್ಪನ್ನಗಳನ್ನು ರೈತರ ಮನೆ ಬಾಗಿಲಿನಿಂದ ನೇರವಾಗಿ ಖರೀದಿಸುವ ಮೂಲಕ ಕರಾವಳಿ ಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ತನ್ನ ಕಾರ್ಯನಿರ್ವಹಣೆ ಮೂಲಕ ಮೆಚ್ಚುಗೆ ಜತೆಗೆ ಜನಮನ್ನಣೆಯನ್ನೂ ಗಳಿಸುತ್ತಿದೆ. ಕರಾವಳಿಯ 332ಕ್ಕೂ ಅಧಿಕ ಗ್ರಾಮಗಳಲ್ಲಿ 15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, 12 ಲಕ್ಷಕ್ಕೂ ಅಧಿಕ ತೆಂಗಿನ ಮರಗಳು ನೋಂದಣಿಯಾಗಿರುತ್ತದೆ.

ಮೌಲ್ಯವರ್ಧಿತ ಉತ್ಪನ್ನಗಳು

ಸಂಸ್ಥೆಯು ತೆಂಗು ಹಾಗೂ ತೆಂಗಿನ ಮರದಿಂದ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿ, ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸುತ್ತಿದೆ. ಇದರಿಂದ ಮಾರುಕಟ್ಟೆ ದರಕ್ಕಿಂತ ಅಧಿಕ ಮೊತ್ತದಲ್ಲಿ ಉತ್ಪನ್ನಗಳನ್ನು ರೈತರಿಂದ ಖರೀದಿಸಲು ಸಾಧ್ಯವಾಗಿದೆ. ಮಧ್ಯವರ್ತಿಗಳಿಗೆ ಅವಕಾಶ ನೀಡದೇ, ಬ್ಯಾಂಕ್ ಇನ್ನಿತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯದೇ ಇರುವುದರಿಂದ ಹೆಚ್ಚಿನ ಲಾಭಾಂಶ ಗಳಿಸಲು ಸಾಧ್ಯವಾಗಿದೆ. ಇದೀಗ ಷೇರು ಸಂಗ್ರಹ ಮೂಲಕ ಸ್ವಾಭಿಮಾನದ ಸಂಸ್ಥೆಯಾಗಿ ಮುನ್ನಡೆಯಲಿದೆ. ಇದಕ್ಕಾಗಿ ಸಾರ್ವಜನಿಕರು ಕೈ ಜೋಡಿಸಬೇಕಿದೆ. ಸದಸ್ಯರ ಹೂಡಿಕೆಗೆ ಸಂಸ್ಥೆಯು ಬದ್ಧತೆಯಿಂದ ಕೂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮಾಧ್ಯಮ ಸಲಹೆಗಾರ ಕುಮಾ‌ರ್ ಪೆರ್ನಾಜೆ, ನಿರ್ದೇಶಕರುಗಳಾದ ಲತಾ ಪಿ ಮತ್ತು ಗಿರಿಧರ ಸ್ಕಂದ, ಅಧ್ಯಕ್ಷ ಕುಸುಮಾಧರ್ ಎಸ್ ಕೆ ಹಾಗು ಮುಖ್ಯಕಾರ್ಯನಿರ್ವಹಣಾಧಿಕಾರಿ ಚೇತನ್ ಎ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟ್ www.coconutfarmers.in ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಟೋಲ್‌ಫ್ರೀ ಸಂಖ್ಯೆ 18002030129ಕ್ಕೆ ಕರೆ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ 8105487763 ಸಂಪರ್ಕಿಸಿ ಹೂಡಿಕೆಗೆ ಸಂಬಂಧಿಸಿದ ಮಾಹಿತಿ ಪಡೆಯ ಬಹುದಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top