ಲೋಕಸಭೆ ಚುನಾವಣೆ | ಕಾಂಗ್ರೆಸ್‍ ನಿಂದ ಮುಂಚೂಣಿಯಲ್ಲಿರುವ ಕಿರಣ್ ಬುಡ್ಲೆಗುತ್ತು ಹೆಸರು ಪಟ್ಟಿಯಿಂದ ಕೈಬಿಡುವಂತೆ ಹುನ್ನಾರ | ಕಾಂಗ್ರೆಸ್‍ಗೆ  ಮುಳುವಾಗಲಿದೆಯೇ ಈ ಹುನ್ನಾರ

ಮಂಗಳೂರು: ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕರಾವಳಿ ಭಾಗದಲ್ಲಿ ದೊಡ್ಡ ಮಟ್ಟದ ರಾಜಕೀಯ ಸ್ತಿತ್ಯಂತರಗಳು ಗೋಚರವಾಗುತ್ತಿವೆ. ಒಂದೆಡೆ ಕಳೆದ ವಿಧಾನಸಭಾ ಸಂದರ್ಭ ಹೊರಡಿಸಿದ ಗ್ಯಾರಂಟಿ ಯೋಜನೆ ಕರಾವಳಿಯ ಪ್ರಜ್ಞಾವಂತ ಜನರಲ್ಲಿ ಆಶಾಭಾವನೆ ಮೂಡಿಸಿರುವುದು ಕಾಂಗ್ರೆಸ್ ಸಣ್ಣ ಪ್ರಯತ್ನದಲ್ಲಿ ಈ ಬಾರಿ ಗೆಲುವು ಸಾಧಿಸುವ ಸಾಧ್ಯತೆಗಳಿವೆ ಎನ್ನುವುದು.

ಮತ್ತೊಂದೆಡೆ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಗ್ಗೆ ಜನರಿಗಿರುವ ಕೋಪದ ಜತೆ ಒಟ್ಟಾರೆಯಾಗಿ ಕರಾವಳಿಯಲ್ಲಿ ಬಿಜೆಪಿ ಕುರಿತು ಇರುವ ಅಸಮಾಧಾನ. ಈ ಹಿನ್ನಲೆಯಲ್ಲಿ ಕಾಂಗ್ರೆಸ್‍ ಕರಾವಳಿಯಲ್ಲಿ ಗೆಲ್ಲುವ ಆಶಾಭಾವನೆಯನ್ನು ಕಾಂಗ್ರೆಸ್ಸಿಗರು ಹೊಂದಿದ್ದಾರೆ.

ಇಂತಹ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ನ ಯಾರೋ ಕೆಲವರ ಹುನ್ನಾರಗಳಿಂದ ಕಾಂಗ್ರೆಸ್ ತನ್ನ ಕಾಲ ಮೇಲೆ ತಾನೇ ಸೈಜು ಕಲ್ಲು ಹಾಕಿಕೊಳ್ಳುತ್ತಿದೆಯಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ.





























 
 

ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಹಲವು ಮಂದಿ ಆಕಾಂಕ್ಷಿಗಳಿದ್ದಾರೆ. ಅವರ ಮಧ್ಯೆ, ಯುವ ನಾಯಕ, ದಕ್ಷಿಣ ಕನ್ನಡದ ಬಹು ಸಂಖ್ಯಾತ ಸಮುದಾಯಕ್ಕೆ ಸೇರಿದ ಕಿರಣ್ ಗೌಡ ಬುಡ್ಲೆಗುತ್ತು ಹೆಸರು ಮುಂಚೂಣಿಯಲ್ಲಿದೆ. ಕಳೆದ 23 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಜೊತೆ ನಂಟು ಬೆಸೆದುಕೊಂಡು ಹಲವಾರು ನಾಯಕತ್ವಗಳನ್ನು, ಹೋರಾಟಗಳನ್ನು ವಹಿಸಿಕೊಂಡು ಬಂದಿರುವ ಕಿರಣ್ ಕಾಂಗ್ರೆಸ್ ಮಂಗಳೂರು ಲೋಕಸಭಾ ಎಂಪಿ ಅಭ್ಯರ್ಥಿಯ ಪಟ್ಟಿಯಲ್ಲಿ ಪದೇ ಪದೇ ಕೇಳಿ ಬರುತ್ತಿರುವ ಹೆಸರು. ಹಲವು ಸಮಾಜಗಳ ಮತ್ತು ಸಂಘಟನೆಗಳ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ಕಿರಣ್ ಗೌಡ ಬುಡ್ಲೆಗುತ್ತು ಹುಟ್ಟು ಸಂಘಟಕ, ಸೈಲೆಂಟ್ ಕೆಲಸಗಾರ. ಅವರ ಗೆಲುವು ಈ ಬಾರಿ ಸುಲಭ ಎನ್ನಲಾಗುತ್ತಿತ್ತು. ಅದರಂತೆ ಕಿರಣ್ ಗೌಡ ಬುಡ್ಲೆಗುತ್ತು ಹೆಸರು ಎಲ್ಲೆಡೆ ಕೇಳಿ ಬರುತ್ತಿತ್ತು. ಸ್ಥಳೀಯ ಮತ್ತು ರಾಜ್ಯದ ಅಭ್ಯರ್ಥಿ ಪಟ್ಟಿಯಿಂದ ಅವರ ಹೆಸರನ್ನು ಕೈ ಬಿಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದು ಬಂದಿದೆ. ಕಿರಣ್ ಹೆಸರನ್ನು ಕಾಂಗ್ರೆಸ್ ಪಟ್ಟಿಯಿಂದ ಹೊರಗೆ ಇಡುವಂತೆ ಲಾಬಿ ಮಾಡುತ್ತಿರುವವರು ಯಾರು ಎಂಬುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನದ ಹೊಗೆ ಸಾಕಷ್ಟು ದೊಡ್ಡದಾಗಿಯೇ ಹುಟ್ಟಿಕೊಂಡಿದೆ. ಅದಕ್ಕೆ ಬೇರೆ ಕಾರಣಗಳೂ ಇಲ್ಲ ಯಾಕೆಂದರೆ ಕಾಂಗ್ರೆಸ್ ನಡೆಸಿದ ಬಹುತೇಕ ಸರ್ವೇಗಳಲ್ಲಿ ಕಿರಣ್ ಗೌಡ ಬುಡ್ಲೆ ಗುತ್ತು ಹೆಸರು ಮುಂಚೂಣಿಯಲ್ಲಿತ್ತು. ಯಾವ ಕಡೆಯಿಂದ ಅಳೆದು ತೂಗಿದರೂ ತಕ್ಕಡಿ ಕಿರಣ್ ಗೌಡ ಬುಡ್ಲೆಗುತ್ತು ಕಡೆಗೇ ಜಗ್ಗಿಕೊಂಡು ನಿಂತಿತ್ತು. ಇದರಿಂದ ತಲೆಕೆಡಿಸಿಕೊಂಡಿರುವ ಕೆಲವು ನಾಯಕರುಗಳು ಕಿರಣ್ ಹೆಸರನ್ನೇ ಪಟ್ಟಿಯಿಂದ  ಬಿಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ.

ಒಟ್ಟಾರೆಯಾಗಿ, ಇಂದಿನ ಬದಲಾದ ರಾಜಕೀಯ ಪರಿಸ್ಥಿತಿಯ ಮತ್ತು ತಂತ್ರಗಾರಿಕೆಯ ಲೆಕ್ಕಾಚಾರದ ದೃಷ್ಟಿಯಿಂದ ನೋಡುವುದಾದರೆ, ಸುಲಭವಾಗಿ ಗೆಲ್ಲಬಹುದಾದ ಸ್ಥಾನವನ್ನು ಕಾಂಗ್ರೆಸ್ ಎಲ್ಲಿ ಕೈ ಚೆಲ್ಲಿ ಬಿಟ್ಟು ಕೊಡಲಿದೆಯೇ ಎನ್ನುವ ಆತಂಕ ಕಾಂಗ್ರೆಸ್ ಕಾರ್ಯಕರ್ತರದ್ದು. ಇತಿಹಾಸದಲ್ಲಿ ಕಾಂಗ್ರೆಸ್ ಇಂತಹ ತಪ್ಪುಗಳನ್ನೇ ಪದೇ ಪದೇ ಮಾಡಿ ಕೈ ಸುಟ್ಟಿಕೊಂಡಿದೆ. ಏನಿದ್ದರೂ ಸ್ಪಷ್ಟ ಮಾಹಿತಿ ಲಭ್ಯ ಆಗುವ ತನಕ ಕಾದು ನೋಡಬೇಕಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top