ಪುತ್ತೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ 60ನೇ ವರ್ಷಕ್ಕೆ ಪಾದಾರ್ಪಣೆ ಅಂಗವಾಗಿ ಶೌರ್ಯ ಜಾಗರಣ ರಥಯಾತ್ರೆ ಹಾಗೂ ಬೃಹತ್ ಹಿಂದೂ ಶೌರ್ಯ ಸಂಗಮ ಶನಿವಾರ ಸಂಜೆ ಪುತ್ತೂರಿನಲ್ಲಿ ನಡೆಯಿತು.

ಸನಾತನ ಧರ್ಮವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ, ಸಮಸ್ತ ಹಿಂದೂಗಳನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ 1964 ರಲ್ಲಿ ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್ ಧರ್ಮೋ ರಕ್ಷತಿ ರಕ್ಷಿತಃ ಎಂಬ ಧ್ಯೇಯವಾಕ್ಯದೊಂದಿಗೆ ೬೦ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಸೆ.25 ರಂದು ಚಿತ್ರದುರ್ಗದಿಂದ ಹೊರಟ ರಥಯಾತ್ರೆ ಅ.7 ಶನಿವಾರ ಸುಬ್ರಹ್ಮಣ್ಯ, ಕಡಬ ಮೂಲಕ ಪುತ್ತೂರಿಗೆ ಸಂಜೆ ವೇಳೆ ತಲುಪಿತು.

ಪುತ್ತೂರಿನ ಬೊಳವಾರು ಶ್ರೀ ಆಂಜನೇಯ ಮಂತ್ರಾಲಯದ ಮುಂಭಾಗದಲ್ಲಿ ರಥವನ್ನು ಮಹಿಳೆಯರು ಪುಷ್ಪಾರ್ಚನೆಯೊಂದಿಗೆ ಸ್ವಾಗತಿಸಿದರು. ಅಲ್ಲಿ ಶೌರ್ಯ ಜಾಗರಣ ರಥಯಾತ್ರೆಗೆ ಹಿಂದೂ ಸಂಘಟನೆಯ ಹಿರಿಯ ಕಾರ್ಯಕರ್ತ ಮೊಗೆರೋಡಿ ಬಾಲಕೃಷ್ಣ ರೈ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಚೆಂಡೆ, ಶಂಖನಾದ, ವೀರ ಪರಾಕ್ರಮಿಗಳ ವೇಷಧಾರಣೆ, ಶ್ವೇತ ವರ್ಣದ ಬಟ್ಟೆಗಳನ್ನು, ಕೇಸರಿ ಮುಂಡಾಸು ಧರಿಸಿದ ಹುಡುಗಿಯರು ಕೈಯಲ್ಲಿ ಕೇಸರಿ ಬಾವುಟ ಹಿಡಿದು ರಥಯಾತ್ರೆಯೊಂದಿಗೆ ಸಾಗಿದರು. ಮುಖ್ಯರಸ್ತೆಯಾಗಿ ಸಾಗಿದ ರಥ ನಗರದ ಕಿಲ್ಲೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದೊಂದಿಗೆ ಸಮಾಪನಗೊಂಡಿತು.

ಈ ಸಂದgರ್ಭದಲ್ಲಿ ವಿಹಿಂಪ ಕರ್ನಾಟಕ ದಕ್ಷಿಣಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ, ಬಜರಂಗದಳ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಶೌರ್ಯ ಜಾಗರಣ ರಥಯಾಥ್ರೆ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಸಂಚಾಲಕ ಕೃಷ್ಣಪ್ರಸಾದ್ ಬೆಟ್ಟ, ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ವಿಹಿಂಪ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ಸಹಸಂಚಾಲಕ ಶ್ರೀಧರ್ ತೆಂಕಿಲ ಸೇರಿದಂತೆ ಹಿಂದೂ ಸಂಘಟನೆಯ ಪ್ರಮುಖರು, ಕಾರ್ಯಕರ್ತರು,ಮತ್ತಿತರರು ಪಾಲ್ಗೊಂಡಿದ್ದರು.

ಕಿಲ್ಲೆ ಮೈದಾನದಲ್ಲಿ ನಡೆದ ಬೃಹತ್ ಹಿಂದೂ ಶೌರ್ಯ ಸಂಗಮದಲ್ಲಿ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ್ ಸು.ರಾಮಣ್ಣ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ವಿಹಿಂಪ ಕರ್ನಾಟಕ ದಕ್ಷಿಣಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ, ಬಜರಂಗದಳ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಉಪಸ್ಥಿತರಿದ್ದರು.
ರಥಯಾತ್ರೆ ಸಂದರ್ಭದಲ್ಲಿ ಶೌರ್ಯ ಜಾಗರಣ ರಥಯಾಥ್ರೆ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಸಂಚಾಲಕ ಕೃಷ್ಣಪ್ರಸಾದ್ ಬೆಟ್ಟ, ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ವಿಹಿಂಪ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ಸಹಸಂಚಾಲಕ ಶ್ರೀಧರ್ ತೆಂಕಿಲ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.