ಪುತ್ತೂರು: ನಗರದ ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿ ವತಿಯಿಂದ ಏಳು ದಿನಗಳ ಕಾಲ ನಡೆದ ಶ್ರೀ ಗಣೇಶೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಸಮಾಪನಗೊಂಡಿತು.

ಏಳು ದಿನಗಳ ಕಾಲ ನಡೆದ ಶ್ರೀ ಗಣೇಶೋತ್ಸವದಲ್ಲಿ ವಿವಿಧ ಧಾರ್ಮಿಕ, ಮೂಡಪ್ಪ ಸೇವೆ, ತುಲಾಭಾರ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರಗಿತು.

ಸೋಮವಾರ ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ ಬಳಿಕ ಮಧ್ಯಾಹ್ನ 1 ಗಂಟೆಗೆ ಉತ್ಸವ ಬಲಿ ನಡೆಯಿತು. ಸಂಜೆ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವದ ಭೂತಕೋಲ ಜರಗಿತು. ರಾತ್ರಿ ತಾಲೀಮು ಪ್ರದರ್ಶನ, ಸುಡುಮದ್ದು ಪ್ರದರ್ಶನ ನಡೆದು, ವೈಭವದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಶೋಭಾಯಾತ್ರೆ ಕೋರ್ಟ್ ರಸ್ತೆಯಿಂದ ಹೊರಟು ದರ್ಬೆ, ಪರ್ಲಡ್ಕ, ತಾಲೂಕು ಆಫೀಸು ರಸ್ತೆ, ರಾಧಾಕೃಷ್ಣ ಮಂದಿರ, ಬೊಳುವಾರು ಮಾರ್ಗವಾಗಿ ತೆರಳಿ ಮಂಜಲ್ಪಡ್ಪು ಕೆರೆಯಲ್ಲಿ ಶ್ರೀ ಗಣೇಶ ವಿಗ್ರಹ ವಿಸರ್ಜನೆಗೊಂಡಿತು.
ಈ ಸಂದರ್ಭದಲ್ಲಿ ಶ್ರೀ ದೇವತಾ ಸಮಿತಿ ಕಾರ್ಯದರ್ಶಿ ರಮೇಶ್, ಕೋಶಾಧಿಕಾರಿ ಸಿ. ಶ್ರೀಧರ ನಾಯಕ್, ಸದಸ್ಯರಾದ ದಿನೇಶ್ ಕುಲಾಲ್ ಪಿ.ವಿ., ಗಣೇಶ್ ಶೆಟ್ಟಿ, ರತ್ನಾಕರ ಆಚಾರ್ಯ, ಕಿಟ್ಟಣ್ಣ ಗೌಡ, ವಸಂತ ನಾಯಕ್, ಸುದೇಶ್ ಕುಮಾರ್, ಸುದರ್ಶನ್ ಶೆಟ್ಟಿ, ಗಣಪತಿ ಪೈ, ಭಕ್ತಾದಿಗಳು ಪಾಲ್ಗೊಂಡಿದ್ದರು.