ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ದುರಾಸೆಯೇ ಮುಖ್ಯ ಕಾರಣ : ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ | ಕರ್ನಾಟಕದ ಇಂದಿನ ಅಗತ್ಯಗಳು “ಜನ ಸಂವಾದ” ಕಾರ್ಯಕ್ರಮ  

ಪುತ್ತೂರು : ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ದುರಾಸೆ ಮೂಲ ಕಾರಣವಾಗಿದ್ದು, ಎಲ್ಲಾ ಖಾಯಿಗಳಿಗೆಗೆ ಔಷಧಿಯಿದ್ದರೆ ದುರಾಸೆಗೆ ಔಷಧಿಯಿಲ್ಲ. ಇದನ್ನು ಹೋಗಲಾಡಿಸಲು ಮಹಾತ್ಮ ಗಾಂಧೀನಿಯವರು ಹೇಳಿದ ಒಂದು ದಾರಿ ತೃಪ್ತಿ. ತೃಪ್ತಿಯಿಂದ ದುರಾಷೆಯನ್ನು ಮಟ್ಟ ಹಾಕಬಹುದು ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಹೇಳಿದರು.

ಅವರು ಭಾನುವಾರ ನಗರದ ಜೈನ ಭವನದಲ್ಲಿ ಪುತ್ತೂರು ಗಾಂಧಿ ವಿಚಾರ ವೇದಿಕೆ ಹಾಗೂ ಮಂಗಳೂರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ನಡೆದ ಕರ್ನಾಟಕದ ಇಂದಿನ ಅಗತ್ಯತೆಗಳು ಕುರಿತ “ಜನ ಸಂವಾದ” ಕಾರ್ಯಕ್ರಮದಲ್ಲಿ ಭಷ್ಟಾಚಾರ ನಿಯಂತ್ರಣ ಮತ್ತು ದಕ್ಷ ಆಡಳಿತ ಕುರಿತು ವಿಚಾರದಲ್ಲಿ ಮಾತನಾಡಿದರು.

ಮಹಾತ್ಮ ಗಾಂಧೀಜಿಯವರು ಅಹಿಂಸೆಯಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡವರು. ದುರಾಸೆ ಇದ್ದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಇರಲು ಸಾಧ್ಯವಿಲ್ಲ. ದುರಾಸೆ ವಿಚಾರದಲ್ಲಿ ರಾಜಕೀಯ ಮೇಲುಗೈ ಸಾಧಿಸಿದೆ. ಹಿಂದೆ ರಾಜಕೀಯ ನಿಜವಾದ ಜನಸೇವೆಯಲ್ಲಿ ತೊಡಗಿಕೊಂಡಿತ್ತು. ಪ್ರಸ್ತುತ ನಿಜವಾಸ ಜನಸೇವೆ ಆಗ್ತಾ ಇದೆಯೇ ಎಂದು ಪ್ರಶ್ನಿಸಿದ ಅವರು, ಈ ನಿಟ್ಟಿನಲ್ಲಿ ಧರ್ಮ-ಭಾಷೆಯ ದುರ್ಬಳಕೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಬದಲಾವಣೆಯನ್ನು ಶಾಂತಿಯುತವಾಗಿ ತರಬೇಕಾಗಿದೆ. ಇದಕ್ಕೆ ಇಂತಹಾ ಕಾರ್ಯಕ್ರಮಗಳು ಪೂರಕ ಎಂದ ಅವರು, ಹಿರಿಯರು ಕಟ್ಟಿದ ಮೌಲ್ಯ ಮಾನವೀಯತೆ ಒಂದಾಗಿದೆ. ಜೀವನ ಪಥದಲ್ಲಿ ಮಾನವೀಯ ಮೌಲ್ಯದ ಪಾತ್ರ ಬಹುಮುಖ್ಯವಾಗಿದ್ದು, ಇದಕ್ಕೆ ಸಿಗುವ ಗೌರವ ಬೇರೆ ಯಾವುದಕ್ಕೂ ಸಿಗಲ್ಲ. ಭವಿಷ್ಯದಲ್ಲಿ ಬದಲಾವಣೆ ತರಬೇಕಾದರೆ ಮಕ್ಕಳಲ್ಲಿ ಈ ಕುರಿತು ಹುರಿದುಂಬಿಸಬೇಕು. ಆಗ ಪ್ರಜಾಪ್ರಭುತ್ಸದ ಅರ್ಥವನ್ನು ಮಕ್ಕಳು ತಿಳಿಯಲು ಸಾಧ್ಯ ಎಂದರು.





























 
 

ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಸಾಮಾಜಿಕ ಅಗತ್ಯಗಳು ಕುರಿತು ಮಾತನಾಡಿ, ಪ್ರಸ್ತುತ ಪ್ರಗತಿಯ ಮಾನದಂಡಗಳಿಂದ ಆರೋಗ್ಯ ಕ್ಷೀಣಿಸುತ್ತಿದೆ. ಶಿಕ್ಷಣದ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತಿವೆ. ಸಾಮಾಜಿಕವಾಗಿ ಇದನ್ನು ಸರಿಮಾಡಬೇಕಾಗಿದೆ. ಸಾಮಾಜಿಕ ವ್ಯವಸ್ಥೆಯ ಮೌಲ್ಯ ದುಡ್ಡಿನಿಂದ ಅಳೆಯಲಾಗುತ್ತಿದ್ದು, ಮೌಲ್ಯ ಕಳೆದುಕೊಳ್ಳುತ್ತಿದೆ. ಭಾಷೆ, ಧರ್ಮ, ಸಂಸ್ಕೃತಿಯ ಕುರಿತು ವಿಚಾರ ಮಾಡಬೇಕಾದ ಈ ಸಂದರ್ಭದಲ್ಲಿ ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಕರಾವಳಿಯ ಧಾರಣಾ ಶಕ್ತಿಯನ್ನು ಕಾಲಕಾಲಕ್ಕೆ ಆಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಗಾಂಧಿ ವಿಚಾರ ವೇದಿಕೆಯ ವ್ಯವಸ್ಥಾಪಕ ಸದಸ್ಯ, ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿಯ ಎನ್.ಎಂ.ಬಿರಾದಾರ ಯುವ ಜನತೆಯ ಅಗತ್ಯಗಳು ಕುರಿತು ಮಾತನಾಡಿ, ನಾಡಿನ ಭವಿಷ್ಯ ಯುವ ಜನತೆಯ ಕೈಯಲ್ಲಿದ್ದು, ಪ್ರಸ್ತುತ ಯುವಕ-ಯುವತಿಯರು ಯಾವ ಕಡೆ ವಾಲುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಮದ್ಯಪಾನ, ಡ್ರಗ್ಡ್ ಚಟಗಳಿಗೆ ಯುವಜನತೆ ಬಲಿ ಬೀಳುತ್ತಿದ್ದು, ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುವಲ್ಲಿ ಪೋಷಕರು ವಿಫಲರಾಗಿದ್ದಾರೆ. ಸರಿಯಾದ ಮಾರ್ಗದರ್ಶನದ ಕೊರತೆ ದಾರಿ ತಪ್ಪಲು ಕಾರಣವಾಗಿದೆ. ಜತೆಗೆ ಆಲೋಚನೆಗಳ ಕೊರತೆಯಿಂದ ಕಲಿಕೆಯಲ್ಲಿ ಹಿಂದೆ ಬೀಳುವ ಪರಿಸ್ಥಿತಿ ಉಂಟಾಗಿದೆ. ಈ ದೃಷ್ಟಿಯಲ್ಲಿ ಉತ್ತಮ ಪ್ರಜೆ ಎನಿಸಬೇಕಾದರೆ ಯುವಕ-ಯುವತಿಯರ ದೃಷ್ಟಿ, ಕೈ, ಮನಸ್ಸು ಶುದ್ಧವಾಗಬೇಕಾದ ಅಗತ್ಯತೆಯಿದೆ ಎಂದ ಅವರು, ಗಾಂಧೀಜಿಗೆ ಸರಿಸಮಾನವಾದ ವ್ಯಕ್ತಿ ಇಡೀ ಜಗತ್ತಿನಲ್ಲಿ ಯಾರೂ ಇಲ್ಲ. ಆದರೂ ಗಾಂಧೀಜಿಯನ್ನು ವಿಚಾರ, ಆದರ್ಶದಲ್ಲಿ ಕಾಣುತ್ತಾರೆ ಹೊರತು ಸ್ವಾತಂತ್ರ್ಯದಲ್ಲಿ ಅಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟ ಸೂಕ್ಷ ಪ್ರದೇಶವಾಗಿದ್ದು, ಅಭಿವೃದ್ಧಿ ನಿಟ್ಟಿನಲ್ಲಿ ಹಾನಿ ಮಾಡಲಾಗುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳಲು ಸಾಧ್ಯವಿ;ಲ್ಲವೇ ಎಂದು ವಿದ್ಯಾರ್ಥಿನಿ ಶ್ವೇತಾ ಅವರು ಕೇಳಿದ ಪ್ರಶ್ನೆಗೆ ಜಸ್ಟೀಸ್ ಸಂತೋಷ್ ಹೆಗ್ಡೆಯವರು ಉತ್ತರಿಸಿ, ಪರಿಸರ ರಕ್ಷಣೆಯಲ್ಲಿ ಸಾಕಷ್ಟು ಅನ್ಯಾಯಗಳಾಗುತ್ತಿದ್ದು, ಈ ಕುರಿತು ನ್ಯಾಷನಲ್ ಗ್ರೀನ್ ಟ್ರಿ ಬ್ಯುನಲ್ ಗೆ ಹೋಗುವುದೊಂದದೇ ದಾರಿ ಎಂದರು.

ವಿದ್ಯಾರ್ಥಿನಿ ರಕ್ಷಿತಾ, ಈಗಾಗಲೇ ತುಳುಭಾಷೆಯನ್ನು 8ನೇ ಪರಿಚ್ಛೇದಲ್ಲಿ ಮಾನ್ಯ ಮಾಡಬೇಕಾಗಿದ್ದು, ಕಾನೂನಿನಿಂದ ಸಾಧ್ಯವಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಜ.ಸಂತೋಷ್ ಹೆಗ್ಡೆ ಉತ್ತರಿಸಿ, ನಿರ್ಧಾರ ತೆಗೆದುಕೊಳ್ಳಬೇಕಾದ ಶಕ್ತಿ ಬೇಕು. ಅಧಿಕಾರದಲ್ಲಿದ್ದವರಿಗೆ ತುಳು ಭಾಷೆ ಬರದಿರುವುದರಿಂದ ಻ವರ ಭಾವನೆಗಳೇ ಬೇರೆಯಾಗಿದೆ ಎಂದು ಉತ್ತರಿಸಿದರು.

ಭ್ರಷ್ಟಾಚಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಯಾಕೆ ಎಡವಲಾಗುತ್ತಿದೆ ಎಂದು ದೀಪ್ತಿ ರೈ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಹೆಗ್ಡೆ, ಅಕ್ರಮವಾಗಿ ಸಂಪಾದಿಸಿದ ಚರ, ಸೊತ್ತುಗಳನ್ನು ಸರಕಾರಕ್ಕೆ ಒಪ್ಪಿಸಬೇಕಾಗಿರುವುದು ಕಾನೂನು. ಈ ವಿಚಾರಲ್ಲಿ ಭ್ರಷ್ಟಾರಿಗಳಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಆದರೆ ಅಕ್ರಮ ಸಂಪಾದನೆಯ ಚರ ಸೊತ್ತುಗಳು ಮುಟ್ಟುಗೋಲು ಆಗದಿರುವುದು ವಿಷಾಧನೀಯ ಎಂದರು.

ಹಲವಾರು ಕೇಸುಗಳು ಸರಿಯಾಗಿ ಇತ್ಯರ್ಥಗೊಳ್ಳದೆ ನ್ಯಾಯಾಲಯದ ಹಿಂದೆ ಸರಿಯುತ್ತಿದೆ ಎಂದು ಸರ್ವೇಶ್ ಎಂಬವರು ಕೇಳಿದ ಪ್ರಶ್ನೆಗೆ, ವೈಯಕ್ತಿಕ ವಿಚಾರಗಳನ್ನು ನ್ಯಾಯಾಲಯದ ಕಟಕಟೆಗೆ ತರಬಾರದು. ಹೆಚ್ಚಿನ ಕೇಸುಗಳು ವೈಯಕ್ತಿ ವಿಚಾರಕ್ಕೆ ಸಂಬಂಧಿಸಿರುವುದರಿಂದ ಸರಿಯಾಗಿ ಇತ್ಯರ್ಥ ಆಗುತ್ತಿಲ್ಲ ಎಂದರು.

ನ್ಯಾಯಾಂಗ, ಕಾರ್ಯಾಂಗದ ಹುದ್ದೆಯಿಂದ ನಿವೃತ್ತಿಯಾದವರು ಸರಕಾರಿ ಅಥವಾ ಖಾಸಗಿ ಇರಬಹುದು. ಬೇರೆ ಹುದ್ದೆಗಳನ್ನು ನಿಭಾಯಿಸುವುದು ಸರಿಯೇ, ತಪ್ಪೇ ಎಂದು ರಾಜೇಶ್ ಕೃಷ್ಣ ಪ್ರಸಾದ್ ಕೇಳಿದ ಪ್ರಶ್ನೆಗೆ, ಉತ್ತರಿಸಿದ ಸಂತೋಷ್ ಹೆಗ್ಡೆ, ಏನೂ ತಪ್ಪಿಲ್ಲ. ಇತ್ತೀಚೆಗೆ ನ್ಯಾಯಾಲಯದ ನ್ಯಾಯಧೀಶರೊಬ್ಬರನ್ನು ಒಂದು ರಾಜ್ಯ ರಾಜ್ಯಪಾಲರನ್ನಾಗಿ ನೇಮಿಸಿದೆ. ಅಲ್ಲದೆ ರಾಜಕೀಯಕ್ಕೂ ಸೇರಿದ್ದಾರೆ. ಇಲ್ಲಿ ಮುಖ್ಯ ವಿಚಾರ ಎಂದರೆ ಒಳ್ಳೆಯ ಉದ್ದೇಶ ಇಟ್ಟು ರಾಜಕೀಯಕ್ಕೆ ಬಂದರೆ ತಪ್ಪಿಲ್ಲ ಎಂದರು.

ಸರಕಾರಿ ಅನುದಾನವನ್ನು ಖಾಸಗಿ ಸಂಸ್ಥೆಗಳಿಗೆ ನೀಡಬಹುದು ಎಂದು ಶಿಕ್ಷಕ ಉದಯ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ಕಾನೂನಿನಲ್ಲಿ ವಿದ್ಯೆ, ಆರೋಗ್ಯದ ಕುರಿತ ಜವಾಬ್ದಾರಿ ಸರಕಾರದ್ದು. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳಿಗೆ ಹಣ ಟ್ರಾನ್ಟ್ ಫರ್ ಮಾಡುವುದು ಸರಿಯಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಪುತ್ತೂರಿನ ಚಿಂತಕ ವಿಲ್ಫ್ರೆಡ್ ಡಿ;ಸೋಜಾ, ಗಾಂಧಿ ವಿಚಾರ ವೇದಿಕೆ ಮಾತೃ ಘಟಕದ ಅಧ್ಯಕ್ಷ ಶ್ರೀಧರ ಭಿಡೆ, ಮಂಗಳೂರು ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಇಸ್ಮಾಯಿಲ್ ಪಾಲ್ಗೊಂಡು ಮಾತನಾಡಿದರು. ಪುತ್ತೂರು ಗಾಂಧಿ ವಿಚಾರ ವೇದಿಕೆ ಅಧ್ಯಕ್ಷ ಝೇವಿಯರ್ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉಪಸ್ಥಿತರಿದ್ದರು. ಮಾತೃ ಘಟಕದ ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ ಸ್ವಾಗತಿಸಿದರು. ತಾಲೂಕು ಘಟಕದ ಉಪಾಧ್ಯಕ್ಷ ಗೋಪಾಲಕೃಷ್ಣ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಆಡಳಿತ ಮುಖ್ಯಸ್ಥ ಭಾಗ್ಯೇಶ್,  ವೇದಿಕೆಯ ಚಿನ್ಮಯ್ ಕೃಷ್ಣ,  ಅರವಿಂದ ಚೊಕ್ಕಾಡಿ, ಚಂದ್ರಹಾಸ ರೈ ಸಹಕರಿಸಿದರು. ಗಾಂಧಿ ವಂದನ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top