ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಸಭಾಭವನ, ಅನ್ನಛತ್ರ ಉದ್ಘಾಟನೆ
ಬೆಟ್ಟಂಪಾಡಿ : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಪ್ರತಿಷ್ಠಾ ಮಹೋತ್ಸವ, ನೂತನ ಸಭಾ ಭವನ ಹಾಗೂ ಅನ್ನಛತ್ರ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು.
ಶಾಸಕ ಸಂಜೀವ ಮಠಂದೂರು ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿ, ಪರಶುರಾಮ ಸೃಷ್ಟಿಯ ನಮ್ಮ ಈ ನಾಡಿನಲ್ಲಿ ದೇವರ ಆರಾಧನೆ ಮುಖಾಂತರ ದೈವ ದೇವರನ್ನು ಆರಾಧನೆ ಮಾಡುವ ಕಾರ್ಯಕ್ರಮ ಆಗಿದೆ. ಸರಕಾರ ಹಿಂದೂಗಳ ಆರಾಧನೆಗೆ ಪೂರಕವಾಗಿ ದೇವಸ್ಥಾನಗಳ, ಗೋವುಗಳ ರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಸರಕಾರ ಅನುದಾನ ನೀಡಿ ತಡೆಗೋಡೆ, ಇಂಟರ್ಲಾಕ್, ರಸ್ತೆ, ಅನ್ನಛತ್ರ, ಸಬಾಭವನ, ಹೀಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವ ಕೆಲಸ ಮಾಡಿದೆ ಎಂದ ಅವರು, ಭವ್ಯಕಾಶಿ ದಿವ್ಯ ಕಾಶಿ ಯೋಜನೆಯಡಿ ಪ್ರಧಾನಿ ಮೋದಿಯವರು ಅಭಿವೃದ್ಧಿ ಮಾಡುವ ಕೆಲಸ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಧಿಪತಿ ವಿನಯ ಹೆಗ್ಡೆ ಸಬಾಭವನ ಉದ್ಘಾಟಿಸಿದರು. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಗೌರವ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೊಡಿಂಬಾಡಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ, ಧರ್ಮಸ್ಥಳ ಎಸ್ ಕೆಡಿಆರ್ ಡಿಪಿ ಬಿಸಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್ ಎಸ್, ಪ್ರಗತಿಪರ ಕೃಷಿಕ ಪುರುಷೋತ್ತಮ ಭಟ್ ಮಿತ್ತೂರು ಉಪಸ್ಥಿತರಿದ್ದರು.
ಪ್ರಿಯದರ್ಶಿನಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮನಮೋಹನ್ ರೈ ಚೆಲ್ಯಡ್ಕ ಸ್ವಾಗತಿಸಿದರು. ವಿನೋದ್ ಕುಮಾರ್ ರೈ ಗುತ್ತು ವಂದಿಸಿದರು.