ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು : ಶಾಸಕ ಸಂಜೀವ ಮಠಂದೂರು | ತಾಲೂಕು ಸರಕಾರಿ ನೌಕರರ ಸಂಘದ ಕ್ರೀಡಾಕೂಟ ಉದ್ಘಾಟನೆ

ಪುತ್ತೂರು : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಘಟಕದ ವತಿಯಿಂದ ತಾಲೂಕು ಸರಕಾರಿ ನೌಕರರ ಕ್ರೀಡಾಕೂಟ-2023 ಭಾನುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.

ಶಾಸಕ ಸಂಜೀವ ಮಠಂದೂರು ಸಮರಂಭ ಉದ್ಘಾಟಿಸಿ ಮಾತನಾಡಿ, ಶಾರೀರಿಕವಾಗಿ ದೇಹ ಸೌಂಧರ್ಯ ವೃದ್ಧಿಸುವ ಜತೆಗೆ ದೈಹಿಕ ಆರೋಗ್ಯ ಕಾಡಿಕೊಳ್ಳುವಲ್ಲಿ ಕ್ರೀಡೆ ಸಹಕಾರಿಯಾಗಲಿದ್ದು, ಸರಕಾರಿ ನೌಕರರು ಈ ಹಿನ್ನಲೆಯಲ್ಲಿ ವೃತ್ತಿಯನ್ನು ಬದಿಗಿಟ್ಟು ಈ ಕ್ರೀಡಾಕೂಟವನ್ನು ಆಯೋಜಿಸಿದೆ  ಸರಕಾರಿ ನೌಕರರ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಧನೆ ಮಾಡಿದ ಕ್ರೀಡಾಪಡುಗಳನ್ನು ಕ್ರೀಡಾ ಇಲಾಖೆಯಲ್ಲಿ ನೇಮಕಾತಿ ಮಾಡುತ್ತಿದೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಅವಕಾಶವಿದೆ ಎಂದ ಅವರು, ಅತ್ಯಧಿಕ ಮಾನವ ಸಂಪನ್ಮೂಲ ಇರುವ ನಮ್ಮ ದೇಶ ಪ್ರಸ್ತುತ ಆರ್ಥಿಕ, ವೈಜ್ಞಾನಿಕವಾಗಿ ಮುಂದುವರಿದಿದ್ದು, ಕ್ರೀಡೆಯಲ್ಲೂ ಮುಂದಿದ್ದೇವೆ ಎಂಬುದನ್ನು ತೋರಿಸಿಕೊಡುವ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಯಾಗಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಇಂದು ಆಯೋಜಿಸಿರುವ ಕ್ರೀಡಾಕೂಟ ಸರಕಾರಿ ನೌಕರರು ಒಂದೇ ಕುಟುಂಬದ ಸದಸ್ಯರು ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಯಾವುದೇ ಕಾರ್ಯವನ್ನು ಜವಾಬ್ದಾರಿಯುತವಾಗಿ, ಶ್ರದ್ಧೆಯಿಂದ ಮಾಡುತ್ತಿರುವ ಸರಕಾರಿ ನೌಕರರು ಆರೋಗ್ಯದ ದೃಷ್ಟಿಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕೆಲಸ ಕಾರ್ಯಗಳು ಆಗುತ್ತಿದೆ ಎಂದರು.





























 
 

ಇನ್ನೋರ್ವ ಮುಖ್ಯ ಅತಿಥಿ ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪ ಮಾತನಾಡಿ, ಸರಕಾರಿ ನೌಕರರು ಯಾವುದೇ ಒಂದು ಕ್ರೀಡೆಯನ್ನು ಚಟವನ್ನಾಗಿ ಮಾಡಿಕೊಂಡು ದಿನಕ್ಕೆ ಒಂದು ಗಂಟೆ ಮೀಸಲಿಟ್ಟರೆ ಆರೋಗ್ಯವಾಗಿರಲು ಸಾಧ್ಯ ಎಂದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಆಚಾರ್ಯ ಅಧ್ಯಕ್ಷತೆ ವಹಿಸಿ, ಸರಕಾರಿ ನೌಕರರ ಕ್ರೀಡಾಕೂಟಕ್ಕೆ ಸರಕಾರದ ವತಿಯಿಂದ ಅನುದಾನ ನೀಡಲು ಕ್ರಮಕೈಗೊಳ್ಳಬೇಕು ಎಂದು ಶಾಸಕರಲ್ಲಿ ವಿನಂತಿಸಿದರು. ಈಗಾಗಲೇ ಎನ್‌ಪಿಎಸ್‌ಗೆ ೨೦೦೬ ರಿಂದ ಸರಕಾರಿ ನೌಕರರು ಒಳಗೊಂಡಿರುತ್ತಾರೆ. ಮೂಲ ವೇತನದಿಂದ ಶೇ.10 ರಷ್ಟು ಕಟ್‌ಅಪ್ ಮಾಡಲಾಗುತ್ತಿದೆ. ಈ ಕುರಿತು ಕಳೆದ ಬಾರಿ ನೌಕರರು ೧೫ ದಿನಗಳ ಹೋರಾಟ ಮಾಡಿದ್ದು ಬೇಡಿಕೆ ಈಡೇರಿಕೆಯ ಭರವಸೆ ದೊರೆತಿದೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ದೊಡ್ಡ ನಿರೀಕ್ಷೆ ಇಟ್ಟಿದ್ದೆವು. ಈ ಕುರಿತು ಮುಖ್ಯಮಂತ್ರಿಗಳು ಮಾತನಾಡದೇ ಇರುವುದು ಬೇಸರ ತಂದಿದೆ. ಮುಂದಿನ ಚುನಾವಣೆ ಮೊದಲು ಸರಕಾರಿ ನೌಕರರನ್ನು ಸಮಾಧಾನ ಪಡಿಸುವ ಕೆಲಸ ನಡೆಯಬೇಕಾಗಿದೆ ಎಂದು ಶಾಸಕರಲ್ಲಿ ವಿನಂತಿಸಿದರು.

ವೇದಿಕೆಯಲ್ಲಿ ತಾಲೂಕು ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಮಸ್ಕರೇನಸ್, ಖಜಾಂಚಿ ಕೃಷ್ಣ ಬಿ., ಶಿಕ್ಷಕ ಹರಿಪ್ರಕಾಶ್ ಬೈಲಾಡಿ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್, ಸರಕರಿ ವಾಹನ ಚಾಲಕದ ಸಂಘದ ಅಧ್ಯಕ್ಷ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಪಿ.ಕೆ., ಗಿರಿಧರ ಗೌಡ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಮುಕ್ವೆ ಶಾಲಾ ಶಿಕ್ಷಕಿ ವೇದಾವತಿ ಎ. ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ನಡೆದ ನೌಕರರ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಕಾರ್ಯದರ್ಶಿ ಅಬ್ರಹಾಂ ಎಸ್.ಎ. ಸ್ವಾಗತಿಸಿದರು. ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ ಬಿ. ವಂದಿಸಿದರು. ಕ್ರೀಡಾ ಜತೆ ಕಾರ್ಯದರ್ಶಿ ವಿನೋದ್ ಕುಮಾರ್ ಕೆ.ಎಸ್. ವಂದಿಸಿದರು.

೭ನೇ ವೇತನ ಆಯೋಗದ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗವುದು. ಸರಕಾರಿ ನೌಕರರಿಗೆ ಮಧ್ಯಂತರ ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಸರಕಾರದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಎಲ್ಲಾ ನೌಕರರಿಗೆ ನ್ಯಾಯಕೊಡಬೇಕಾದ ಅವಶ್ಯಕತೆಯಿದೆ. ಬಜೆಟ್ ಕುರಿತು ಮತ್ತೊಮ್ಮೆ ಚರ್ಚೆ ನಡೆಯಲಿದೆ. ಈ ಕುರಿತು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು.

ಸಂಜೀವ ಮಠಂದೂರು, ಶಾಸಕರು, ಪುತ್ತೂರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top