ಪುತ್ತೂರು: ಕೃಷಿಯಂತ್ರ ಮೇಳ-2023ರ ಅಂಗವಾಗಿ ರೈತಾಪಿ ವರ್ಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬುಧವಾರ ನಗರದಾದ್ಯಂತ ಕೃಷಿ ಕ್ಷೇತ್ರವನ್ನು ಬಿಂಬಿಸುವ ಬೃಹತ್ ಮೆರವಣಿಗೆ ನಡೆಯಿತು.





ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್ಡಿಎಫ್) ಹಾಗೂ ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಇದರ ಆಶ್ರಯದಲ್ಲಿ ಫೆ.10ರಿಂದ 12ರ ತನಕ ನಡೆಯುವ 5ನೇ ಬೃಹತ್ ಕೃಷಿಯಂತ್ರ ಮೇಳ-2023ರ ಹಿನ್ನೆಲೆಯಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು.
ಕೃಷಿ ಕ್ಷೇತ್ರಕ್ಕೆ ಪೂರಕವಾದ ಟ್ಯಾಬ್ಲೋಗಳೊಂದಿಗೆ ಕ್ಯಾಂಪ್ಕೋ ಸಂಸ್ಥೆಯ ಸಿಬ್ಬಂದಿಗಳು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ವಿವೇಕಾನಂದ ಸಮೂಹ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮರೀಲ್ನಲ್ಲಿರುವ ಕ್ಯಾಂಪ್ಕೋ ಸಂಸ್ಥೆಯಿಂದ ಬೆಳಿಗ್ಗೆ ಹೊರಟ ಮೆರವಣಿಗೆಯಲ್ಲಿ ಅಡಕೆ ಸಹಿತ ಇತರ ಕೃಷಿ ಉತ್ಪನ್ನಗಳನ್ನು ಹೊತ್ತ ವಾಹನ, ಬ್ಯಾಂಡ್ ವಾಲಗದೊಂದಿಗೆ ನಗರಾದ್ಯಂತ ಚಲಿಸಿತು.