ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಪುತ್ತೂರು : ಒಳಮೊಗ್ರು ಗ್ರಾಮ ಪಂಚಾಯುತ್ ಸಾಮಾನ್ಯ ಸಭೆ ಸೋಮವಾರ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.
ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅಕ್ರಮ ಸಕ್ರಮ ಯೋಜನೆಯಲ್ಲಿ ಜಾಗ ಮಂಜೂರಾತಿಗೊಳಿಸುವ ಸಂದರ್ಭ ಗ್ರಾಪಂ ರಸ್ತೆ ಇರುವ ಬಗ್ಗೆ ಹಾಗೂ ರಸ್ತೆಯು ಕನಿಷ್ಠ 6 ಮೀಟರ್ ಅಗಲ ಇರುವ ಬಗ್ಗೆ ನಕ್ಷೆಯಲ್ಲಿ ತೋರಿಸುವಂತೆ ತಹಶೀಲ್ದಾರ್‌ಗೆ ಪತ್ರ ಬರೆಯುವ ನಿರ್ಣಯ ಕೈಗೊಳ್ಳಲಾಯಿತು.
ಹೆಣ್ಣು ಮಕ್ಕಳ ಶಾಲಾ ದಾಖಲಾತಿ ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯ ಶಾಲೆ ಮತ್ತು ಅಂಗನವಾಡಿಗಳಲ್ಲಿ ಹೊಸದಾಗಿ ದಾಖಲಾದ ಹೆಣ್ಣು ಮಕ್ಕಳ ಸಂಖ್ಯೆಯ ಅನುಪಾತ ಆಧಾರದಲ್ಲಿ ಶಾಲೆಯನ್ನು ಗುರುತಿಸಿ ಗ್ರಾಮ ಸಭೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಪ್ರಸ್ತುತ ಅಂತ್ಯ ಸಂಸ್ಕಾರಕ್ಕೆ ಗ್ರಾಪಂನಿಂದ ಎರಡು ಸಾವಿರ ರೂ. ಸಹಾಯಧನ ನೀಡಲಾಗುತ್ತಿದ್ದು, ಮುಂದೆ ಕ್ರಿಯಾ ಯೋಜನೆ ಇಟ್ಟು ಮರಣ ಸಂಭವಿಸಿದ ಮನೆಯ ಕುಟುಂಬಕ್ಕೆ ಐದು ಸಾವಿರ ರೂ. ನೀಡುವ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಎಂ. ಸಲಹೆ ನೀಡಿದರು. ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಕ್ರಮದ ಬ್ಯಾನರ್ ಅಳವಡಿಸುವ ಸಂದರ್ಭದಲ್ಲಿ ಗ್ರಾಪಂನಿಂದ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಪಡೆದ 15 ದಿನಗಳಲ್ಲಿ ತೆರವುಗೊಳಿಸಬೇಕು. ತೆರವು ಮಾಡದಿದ್ದಲ್ಲಿ ಮುಂಗಡ ಪಾವತಿ ಮೊಟಕುಗೊಳಿಸಿ ಬ್ಯಾನರ್ ತೆರವುಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು.
ಗ್ರಾಮದಲ್ಲಿ ಸ್ವಚ್ಛತೆಯ ನಿಟ್ಟಿನಲ್ಲಿ ಪ್ರತೀ ಮನೆಯಲ್ಲಿ ಬಚ್ಚಲು ಗುಂಡಿ ನಿರ್ಮಿಸಬೇಕು. ಕಟ್ಟಡ ಪರವಾನಿಗೆ ನೀಡುವ ಸಂದರ್ಭ ಬಚ್ಚಲು ಗುಂಡಿ ನಿರ್ಮಾಣ ಕಡ್ಡಾಯಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಸುಂದರಿ, ಸದಸ್ಯರಾದ ಮಹೇಶ್ ರೈ, ಲತೀಫ್, ವನಿತಾ, ಪ್ರದೀಪ್, ರೇಖಾ, ನಳಿನಾಕ್ಷಿ, ನಿಮಿತಾ ಬಿ. ಅಬ್ದುಲ್ ಸಿರಾಜುದ್ದೀನ್, ವಿನೋದ್ ಶೆಟ್ಟಿ, ಶಾರದಾ ಚಿತ್ರ, ಅಶ್ರಫ್, ಶೀನಪ್ಪ ನಾಯ್ಕ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಕೇಶವ, ಗುಲಾಬಿ, ಜಾನಕಿ ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top