ರಾಮನಡಿಯಿಟ್ಟ ನೆಲ, ಭೀಮನುಸುರಿದ ಗಾಳಿ|
ವ್ಯೋಮದೆ ಭಗೀರಥಂ ತಂದ ಸುರತಟನಿ||
ಸೋಮನಂ ಪೆತ್ತ ಕಡಲೀ ಪುರತಾನಗಳಿರೆ|
ನಾವೆಂತು ಹೊಸಬರೆಲೊ-ಮಂಕುತಿಮ್ಮ||
ಈ ಭೂಮಿ ಎನ್ನುವುದು ಶ್ರೀರಾಮನು ಪಾದವಿಟ್ಟಂತಹ ಪವಿತ್ರವಾದ ಭೂಮಿಯಿದು. ಇಲ್ಲಿ ಬೀಸುವ ಗಾಳಿ ಭೀಮನು ಉಸಿರಾಡಿದ್ದು. ಇಂದು ಇಲ್ಲಿ ಹರಿಯುತ್ತಿರುವ ಪುಣ್ಯ ನದಿ ಗಂಗೆಯನ್ನು ಅಂದು ಭಗೀರಥ ದೇವಲೋಕದಿಂದ ತಂದಿರುವುದು. ಆಕಾಶದಲ್ಲಿ ಬೆಳಗುವ ಚಂದ್ರ ಬಹಳ ಹಿಂದೆ ಕಡಲಿನಿಂದ ಜನಿಸಿರುವುದು. ಈ ಎಲ್ಲಾ ಹಳತುಗಳು ಇರುವುದರಿಂದ ನಾವು ಹೇಗೆ ಹೊಸಬರಾಗಲು ಸಾಧ್ಯ? ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಪ್ರಶ್ನಿಸಿದ್ದಾರೆ.
ಇಂದು ತಂತ್ರಜ್ಞಾನದ ಯುಗದಲ್ಲಿರುವವರಿಗೆ ಹಳತು ಎಂದರೆ ಪ್ರಯೋಜನವಿಲ್ಲದ್ದು ಎಂಬ ಒಂದು ರೀತಿಯ ತತ್ಸಾರ ಭಾವನೆ ಇದೆ. ಈ ಭೂಮಿ ಹಳತು ಆದರೆ ಅದಿಲ್ಲದೆ ನಮಗೆ ನೆಲೆಯೆ ಇಲ್ಲ. ನಾವು ಉಸಿರಾಡುವ ಗಾಳಿ ಬಹಳ ಹಿಂದೆ ಭೀಮನು ಉಸಿರಾಡಿದ್ದು. ಆದರೆ ಅದಿಲ್ಲದೆ ನಮಗೆ ಜೀವವಿಲ್ಲ. ಹಳೆಯ ಗಂಗೆಯು ಇಂದಿಗೂ ಜನಜೀವನಕ್ಕೆ ಆಸರೆಯಾಗಿದ್ದಾಳೆ. ಹಳೆಯದಾದ ಚಂದ್ರನು ಇಲ್ಲದೆ ನಮಗೆ ಬೆಳದಿಂಗಳಿಲ್ಲ. ಹೀಗೆ ಈ ಹಳತರಲ್ಲೆ ನಮ್ಮ ನವ್ಯ ಜೀವನದ ಶಕ್ತಿ ಅಡಗಿರುವುದು. ಈ ಹಳತರಿಂದಲೇ ಬದುಕನ್ನು ಕಟ್ಟಿಕೊಳ್ಳುವ ನಾವು ಹೇಗೆ ಹೊಸಬರಾಗಲು ಸಾಧ್ಯ?
ನಮ್ಮ ಕಲೆ,ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನೆಲ್ಲಾ ಹಳತು ಎಂದು ತಿರಸ್ಕರಿಸಿದರೆ ಬದುಕಿನ ಸಾರವನ್ನೇ ಕಳೆದುಕೊಂಡಂತೆ ಅಲ್ಲವೆ? ಈ ಹಳತರಲ್ಲಿಯೆ ಜೀವನದ ಹೊಸತನ ಇರುವುದು.
ಗಡಿಗೆ ಒಡೆಯಿತು ಎಂದು ತಲೆ ಮೇಲೆ ಕೈಹೊತ್ತು|
ಚಿಂತಿಸುತ ಕುಳಿತರದು ಬಾಳಕಲೆಯಲ್ಲ||
ಇದೆ ಮಣ್ಣು, ಇದೆ ನೀರು; ಕಲಸಿ ತಿರುಗಿಸು ಚಕ್ರ|
ಕೊಡು ಹೊಸತು ಆಕಾರ – ಮುದ್ದುರಾಮ||
ಎಂಬ ಕವಿ ಕೆ. ಶಿವಪ್ಪನವರ ನುಡಿಯಂತೆ ಹಳೆ ನೀರು ಹಳೆ ಮಣ್ಣನ್ನು ಕಲಸಿ ಹೊಸ ಮಡಕೆಯನ್ನು ಮಾಡುವಂತೆ ಹೊಸ ಯೋಚನೆ ಚಿಂಚನೆಗಳೊಂದಿಗೆ ಬದುಕಿನಲ್ಲಿ ಹೊಸತನವನ್ನು ಕಾಣುವ ಪ್ರಯತ್ನ ಮಾಡಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು ಕಸಾಪ ಕಾರ್ಕಳ ಘಟಕ
ಕಗ್ಗದ ಸಂದೇಶ – ಹಳತರಿಂದ ಹೊಸದುದಿಸಿದಾಗ ಬದುಕಿಗೆ ಸಾರ…
