ಮಹಿಳಾ ಕ್ರಿಕೆಟರ್‌ ಶವ ಕಾಡಿನಲ್ಲಿ ಪತ್ತೆ

ಸಾವಿನ ಸುತ್ತ ಹಲವು ಅನುಮಾನ

ಭುವನೇಶ್ವರ: ಒಡಿಶಾದ ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿಯೊಬ್ಬರ ಶವ ಅರಣ್ಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ.
ಕ್ರಿಕೆಟ್ ಆಟರ್ಗಾತಿ ರಾಜಶ್ರೀ ಸ್ವೈನಿ ಅವರ ಶವ ಕಟಕ್ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಜ.11ರಿಂದ ರಾಜಶ್ರೀ ನಾಪತ್ತೆಯಾಗಿದ್ದರು. ರಾಜಶ್ರೀ ಅವರ ತರಬೇತಿದಾರರು ಗುರುವಾರ ಕಟಕ್‌ನ ಮಂಗಳಬಾಗ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.


ಗುರ್ಡಿ ಜಾಟಿಯಾ ಪೊಲೀಸ್ ಠಾಣೆಯಲ್ಲಿ ರಾಜಶ್ರೀ ಅವರ ಸಾವಿನ ಕುರಿತು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಕೆಯ ಮೈಮೇಲೆ ಗಾಯದ ಗುರುತುಗಳಿದ್ದು, ಆಕೆಯ ಕಣ್ಣುಗಳಿಗೂ ಹಾನಿಯಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ.

ಕಟ್ಟಿಗೆ ಸಂಗ್ರಹಿಸಲು ತೆರಳಿದ್ದ ಸ್ಥಳೀಯರು ಅರಣ್ಯ ರಸ್ತೆಯಲ್ಲಿ ಸ್ಕೂಟರ್ ಮತ್ತು ಹೆಲ್ಮೆಟ್ ಕಂಡು ಮಂಗಳಬಾಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದ್ದು, ಆಕೆಗಾಗಿ ಹುಡುಕಾಡಿದಾಗ ಕಾಡಿನ ನಡುವೆ ದುಪಟ್ಟಾ ಸಹಾಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ರಾಜಶ್ರೀ ಅವರ ಸ್ಕೂಟರ್ ಅರಣ್ಯದ ಬಳಿ ಪತ್ತೆಯಾಗಿದ್ದು, ಆಕೆಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.
ರಾಜಶ್ರೀ ಸೇರಿದಂತೆ ಸುಮಾರು 25 ಮಹಿಳಾ ಕ್ರಿಕೆಟಿಗರು ಪುದುಚೇರಿಯಲ್ಲಿ ನಡೆಯಲಿರುವ ಮುಂಬರುವ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಾಗಿ ಬಜ್ರಕಬಾಟಿ ಪ್ರದೇಶದಲ್ಲಿ ಒಡಿಶಾ ಕ್ರಿಕೆಟ್ ಸಂಸ್ಥೆ (ಒಸಿಎ) ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಎಲ್ಲರೂ ಹೋಟೆಲ್‌ನಲ್ಲಿ ತಂಗಿದ್ದರು. ಒಡಿಶಾ ರಾಜ್ಯ ಮಹಿಳಾ ಕ್ರಿಕೆಟ್ ತಂಡವನ್ನು ಜ.10 ರಂದು ಘೋಷಿಸಲಾಗಿದೆ. ಆದರೆ ರಾಜಶ್ರೀ ಅವರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿರಲಿಲ್ಲ.
ಮರುದಿನ ಆಟಗಾರರು ಅಭ್ಯಾಸಕ್ಕಾಗಿ ತೆರಳಿದ್ದರು. ರಾಜಶ್ರೀ ತಂದೆಯನ್ನು ಭೇಟಿ ಮಾಡಲು ಪುರಿಗೆ ಹೋಗುವುದಾಗಿ ಕೋಚ್‌ಗೆ ತಿಳಿಸಿದ್ದರು. ಆದರೆ ರಾಜಶ್ರೀ ಅವರು ಮನೆಗೂ ತಲುಪಲಿಲ್ಲ. ಬದಲಾಗಿ ಕಾಡಿನಲ್ಲಿ ಶಾವವಾಗಿ ಪತ್ತೆಯಾಗಿದ್ದು, ಅನುಮಾನಗಳಿಗೆ ಕಾರಣವಾಗಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top