ಪುತ್ತೂರು: ಮೊಟ್ಟೆತ್ತಡ್ಕದಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾಗಿ ಡಾ. ಜೆ. ದಿನಕರ ಅಡಿಗ ನೇಮಕಗೊಂಡಿದ್ದಾರೆ.
ಡಿಸಿಆರ್ನ ಪ್ರಧಾನ ವಿಜ್ಞಾನಿಯಾಗಿದ್ದ ಅವರು, ಇದೀಗ ಪದೋನ್ನತಿಗೊಂಡು ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ತೋಟಗಾರಿಕಾ ವಿಷಯದಲ್ಲಿ ೩ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದ್ದ ಡಾ. ಅಡಿಗರು, ತನ್ನ ಪ್ರೌಢ ಪ್ರಬಂಧವನ್ನು ಉನ್ನತ ಶ್ರೇಣಿಯೊಂದಿಗೆ ಪೂರೈಸಿದ್ದರು. ಬಳಿಕ ಸೆಂಟ್ರಲ್ ಕಾಫಿ ರೀಸರ್ಚ್ ಇನ್ಸ್ಟಿಟ್ಯೂಟ್, ಕಿತ್ತೂರು ರಾಣಿ ಚೆನ್ನಮ್ಮ ಕಾಲೇಜ್ ಆಫ್ ಹಾರ್ಟಿಕಲ್ಚರ್ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ, ೨೦೦೭ರಲ್ಲಿ ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಹಿರಿಯ ವಿಜ್ಞಾನಿಯಾಗಿ ನೇಮಕಗೊಂಡು, ೨೦೧೫ರಲ್ಲಿ ಬೆಂಗಳೂರು ಫ್ರೂಟ್ ಸೈನ್ಸ್ ಅಟ್ ಕಾಲೇಜ್ ಆಫ್ ಹಾರ್ಟಿಕಲ್ಚರ್ನಲ್ಲಿ ಪ್ರೊಫೆಸರ್ ಆಗಿಯೂ ಕರ್ತವ್ಯ ನಿರ್ವಹಿಸಿದರು. ಐಎಸ್ಓನ ಸದಸ್ಯರಾಗಿ ಹಾಗೂ ನರ್ಸರಿಯ ಪ್ರಭಾರ ವಿಜ್ಞಾನಿಯಾಗಿ ಕೆಲಸ ನಿರ್ವಹಿಸಿದರು. ಇದುವರೆಗೆ ಡಿಸಿಆರ್ನ ಪ್ರಧಾನ ವಿಜ್ಞಾನಿಯಾಗಿದ್ದ ಡಾ. ದಿನಕರ ಅಡಿಗ ಅವರು, ಇದೀಗ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಉಡುಪಿಯ ಜಂಬೂರಿನಲ್ಲಿ ಹುಟ್ಟಿದ ಇವರು, ಪುತ್ತೂರಿನ ಚೇತನಾ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಜೆ.ಸಿ. ಅಡಿಗ ಅವರ ಸಹೋದರ. ತಂದೆ ದಿ. ಜಂಬೂರು ಶಂಕರನಾರಾಯಣ ಅಡಿಗ, ತಾಯಿ ದಿ. ವೇದಾವತಿ ಅಡಿಗ. ಪತ್ನಿ ಸವಿತಾ ದಿನಕರ ಅಡಿಗ. ಪುತ್ರಿ ಶಚಿ ಅಡಿಗ, ಪುತ್ರ ಶುಭಂಕರ ಅಡಿಗ. ಸದ್ಯ ಪುತ್ತೂರಿನ ಮರೀಲಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.
ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾಗಿ ಡಾ. ದಿನಕರ ಅಡಿಗ
